ರಾಯಚೂರು: ದೇಶದ ಮುಸ್ಲಿಮರಿಗೆ ಬಾಂಗ್ಲಾದಿಂದ ಅಕ್ರಮವಾಗಿ ಬಂದ ಮುಸ್ಲಿಮರ ಮೇಲೆ ಅಭಿಮಾನವಿದೆ ಹೀಗಾಗಿ ಹೋರಾಡುತ್ತಿದ್ದಾರೆ. ದೇಶದಲ್ಲಿ ಕಳೆದ ಅನೇಕ ದಶಕಗಳಿಂದ ವಾಸವಾಗಿರುವವರಿಗೆ ಯಾವುದೇ ಆತಂಕ ಬೇಡ ಅಂತ ಪೇಜಾವರ ಶ್ರೀ ಹೇಳಿದ್ದಾರೆ.
ರಾಯಚೂರಿನಲ್ಲಿ ನಡೆಯುತ್ತಿರುವ ದಾಸಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ವೇಳೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ಪೌರತ್ವ ಕಾಯಿದೆ ಬಗ್ಗೆ ವಿನಾಕಾರಣ ಗೊಂದಲ ಉಂಟಾಗಿದೆ. ಈಶಾನ್ಯ ರಾಜ್ಯಗಳ ನಿವಾಸಿಗಳಿಗೆ ಅವರ ಅಸ್ತಿತ್ವಕ್ಕೆ ಧಕ್ಕೆ ಬರುವ ಆತಂಕವಿದೆ ಅದಕ್ಕಾಗಿಯೇ ಅಲ್ಲಿ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಸೇನೆ ಬಳಸಿ ನಿಯಂತ್ರಿಸುವ ಬದಲು ಮನವರಿಕೆ ಮಾಡಿಕೊಟ್ಟು ಶಾಂತಿ ಪಾಲಿಸಬೇಕು. ಹಿಂದೂಗಳಿಗೆ ಅವರದ್ದೇ ಆದ ದೇಶ ಎಂದರೆ ಅದು ಭಾರತ. ವಲಸೆ ಬಂದಿರುವ ಹಿಂದೂಗಳಿಗೆ ಆಶ್ರಯ ನೀಡುವ ಕೇಂದ್ರದ ಉದ್ದೇಶ ಸರಿಯಾಗಿದೆ ಎಂದರು.
ಬಾಂಗ್ಲಾದಿಂದ ವಲಸೆ ಬಂದವರನ್ನು ಅನ್ಯ ರಾಜ್ಯಗಳಲ್ಲಿ ಆಶ್ರಯ ನೀಡದೇ ಪಶ್ಚಿಮ ಬಂಗಾಳದಲ್ಲೇ ಇರುವಂತೆ ನಿಯಂತ್ರಿಸಬೇಕಿದೆ. ಪೌರತ್ವ ಕಾಯಿದೆ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿ ಮುಸ್ಲಿಮರನ್ನು ಹೊರಗಟ್ಟಲು ಜಾರಿಗೆ ತರಲಾಗುತ್ತಿದೆ. ಸ್ಥಳೀಯವಾಗಿರುವವರು ಆತಂಕ ಪಡೋದು ಬೇಡ ಅಂತ ತಿಳಿಸಿದರು. ಅಯೋಧ್ಯೆ ಟ್ರಸ್ಟ್ ರಚನೆ ಪ್ರಕ್ರಿಯೆಗೆ ಕೇಂದ್ರ ಚಾಲನೆ ನೀಡಿದ್ದು ಸುಪ್ರೀಂಕೋರ್ಟ್ ಸೂಚನೆಯಂತೆಯೇ ಟ್ರಸ್ಟ್ ಅದರ ಕಾಲಮಿತಿಯೊಳಗೆ ರಚನೆಯಾಗಲಿದೆ ಎಂಬ ವಿಶ್ವಾಸವಿದೆ ಅಂತ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಹೇಳಿದರು.