ಆಂಧ್ರ ಪ್ರದೇಶದ ರಾಜಕಾರಣದಲ್ಲಿ ನಟ ನಟಿಯರ ಜಿದ್ದಾಜಿದ್ದಿ ಜೋರಾಗುತ್ತಿದೆ. ಅದರಲ್ಲೂ ರೋಜಾ (Roja) ಮತ್ತು ಪವನ್ ಕಲ್ಯಾಣ್ (Pawan Kalyan) ನಡುವಿನ ವೈಮನಸ್ಸು ಮತ್ತಷ್ಟು ಗಟ್ಟಿಯಾಗುತ್ತಿದೆ. ರೋಜಾ ಅವರನ್ನು ಹೇಗಾದರೂ ಬಗ್ಗು ಬಡಿಯುವುದಕ್ಕಾಗಿಯೇ ನಟ ಪವನ್ ಕಲ್ಯಾಣ್ ರಣತಂತ್ರವೊಂದನ್ನು ಹೆಣೆದಿದ್ದಾರಂತೆ. ಅದು ರೋಜಾಗೆ ಮುಳುವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.
ರೋಜಾ ಈಗಾಗಲೇ ಶಾಸಕಿಯಾಗಿ, ಮಂತ್ರಿಯಾಗಿ ಜನಮಾನಸದಲ್ಲಿ ಬೇರೂರಿದ್ದಾರೆ. ಹಾಗಾಗಿಯೇ ಕಳೆದ ಬಾರಿ ಚುನಾವಣೆಯಲ್ಲಿ (Election) ಪವನ್ ಕಲ್ಯಾಣ್ ವಿರುದ್ಧ ಹರಿಹಾಯ್ದಿದ್ದರು. ಪವನ್ ಕಲ್ಯಾಣ್ ಶಾಸಕ ಕೂಡ ಆಗುವುದಿಲ್ಲವೆಂದು ಭವಿಷ್ಯ ನುಡಿದಿದ್ದರು. ಈ ಮಾತು ಪವನ್ ಕಲ್ಯಾಣ್ ಅವರನ್ನು ಕೆರಳಿಸಿತ್ತು.
ಈ ಬಾರಿ ರೋಜಾ ಅವರು ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಚಿತ್ತೂರು ಜಿಲ್ಲೆಯ ನಗಾರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆ ಕ್ಷೇತ್ರಕ್ಕೆ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರನ್ನು ತಮ್ಮ ಜನಸೇನಾ ಪಕ್ಷದಿಂದ ಕಣಕ್ಕಿಳಿಸಲು ಪವನ್ ಕಲ್ಯಾಣ್ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅನುಷ್ಕಾ ಜೊತೆ ಮಾತು ಕೂಡ ಆಡಿದ್ದಾರಂತೆ.
ರಾಜಕೀಯಕ್ಕೆ ಬರುವ ಕುರಿತಂತೆ ಅನುಷ್ಕಾ ಬಹಿರಂಗವಾಗಿ ಹೇಳಿಕೆ ನೀಡದೇ ಇದ್ದರೂ, ಈ ಕುರಿತಂತೆ ಪವನ್ ಕೂಡ ಮಾತನಾಡದೇ ಇದ್ದರೂ, ತೆರೆ ಮರೆಯಲ್ಲಿ ರಣತಂತ್ರ ಹೆಣದಿದ್ದು ಸುಳ್ಳಲ್ಲಅಂತಿದೆ ಆಂಧ್ರ ರಾಜಕಾರಣ.