ಪಾಟ್ನಾ: ಹಾಡಹಗಲೇ ರೈಲ್ವೆ ನಿಲ್ದಾಣದಲ್ಲಿ ದುಷ್ಕರ್ಮಿಗಳು ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲೆಗೈದಿದ್ದು, ಪತ್ನಿ ಸಹಾಯಕ್ಕಾಗಿ ಗೋಗರಿದರೂ ಜನರು ಕರುಣೆ ತೋರದ ಅಮಾನವೀಯ ಘಟನೆ ಬಿಹಾರದ ಸೀವಾನ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಕೋಲ್ಕತ್ತಾ ಮೂಲದ ಉದ್ಯಮಿ ಮೊಹ್ಮದ್ ಫೈಸಲ್(30) ತನ್ನ ಪತ್ನಿ ಅಂಜೂಮ್ ಖಾಟೂನ್ ಜೊತೆಗೆ ಸೀವಾನ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಬಾಘ್ ಎಕ್ಸಪ್ರೆಸ್ನಲ್ಲಿ ಕೋಲ್ಕತ್ತಾಗೆ ತೆರೆಳಲು ಇಬ್ಬರು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಏಕಾಏಕಿ ದುಷ್ಕರ್ಮಿಗಳು ಮೊಹ್ಮದ್ ಮೇಲೆ ದಾಳಿ ಮಾಡಿ, ಗುಂಡು ಹೊಡೆದು ಎಸ್ಕೇಪ್ ಆಗಿದ್ದಾರೆ. ಇತ್ತ ಕಣ್ಣೆದುರೆ ಪತಿ ನರಳುತ್ತಿದ್ದದ್ದನ್ನು ನೋಡಿ ಪತ್ನಿ ಸಹಾಯಕ್ಕಾಗಿ ಸ್ಥಳದಲ್ಲಿದ್ದವರ ಬಳಿ ಗೋಗರಿದು, ಕಣ್ಣಿರಿಟ್ಟರೂ ಯಾರೂ ಸಹಾಯಕ್ಕೆ ಮುಂದೆ ಬಾರದ ಹಿನ್ನೆಲೆ ಪತ್ನಿ ಮಡಿಲಿನಲ್ಲೇ ಪತಿ ಕೊನೆಯುಸಿರೆಳೆದಿದ್ದಾರೆ.
ಗುಂಡೇಟು ತಿಂದ ಪತಿ ತಲೆಯನ್ನು ಮಡಿಲಲ್ಲಿಟ್ಟು ಮಹಿಳೆ ಸಹಾಯ ಮಾಡಿ ಎಂದು ಕಣ್ಣೀರಿಡುತ್ತಿದ್ದರೆ, ಇತ್ತ ಸುತ್ತಲು ನೆರೆದಿದ್ದ ಜನರು ತಮಾಷೆ ನೋಡುತ್ತಾ, ಮೊಬೈಲ್ಗಳಲ್ಲಿ ವಿಡಿಯೋ ಮಾಡುತ್ತಾ ಮಾನವೀಯತೆ ಮರೆತ್ತಿದ್ದರು. ಈ ವೇಳೆ ಘಟನಾ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಹ್ಮದ್ ಪತ್ನಿಯ ಮಡಿಲಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮಾನವೀಯತೆ ಮೆರೆದ ಜನರಿಗೆ ನೆಟ್ಟಿಗರು ಚೀಮಾರಿ ಹಾಕಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಪತ್ನಿ, ಕಳೆದ 6 ತಿಂಗಳ ಹಿಂದಷ್ಟೇ ನಮ್ಮಿಬ್ಬರ ಮದುವೆಯಾಗಿತ್ತು. ನಾನು ನನ್ನ ಪತಿ ಸುಲ್ತಾನ್ಪುರ್ನಲ್ಲಿರುವ ನನ್ನ ತವರು ಮನೆಯಿಂದ ಕೋಲ್ಕತ್ತಾಗೆ ತೆರಳಲು ರೈಲಿಗೆ ಕಾಯುತ್ತಿದ್ದೆವು. ಈ ವೇಳೆ ದುಷ್ಕರ್ಮಿಗಳು ಗುಂಡು ಹೊಡೆದರು. ಯಾಕೆ ಗುಂಡು ಹಾರಿಸಿದರು? ನನ್ನ ಪತಿ ಅವರಿಗೆ ಏನು ಮಾಡಿದ್ದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಕಾರಣ ಆರೋಪಿಗಳ ಸುಳಿವು ಸಿಕ್ಕಿಲ್ಲ. ಆದರೆ ಆರೋಪಿಯನ್ನು ಪತ್ತೆ ಹಚ್ಚಲು ಹತ್ತಿರದ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.