ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಹೊತ್ತಿ ಉರಿದ ಬಳಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಹೊನ್ನಾವರದ ಪರೇಶ್ ಮೇಸ್ತಾ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಪರೇಶ್ ಕುಟುಂಬದ ಬೇಡಿಕೆಯಂತೆ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿರೋದಾಗಿ ತಿಳಿಸಿದ್ದಾರೆ. ಬಿಜೆಪಿಯವರ ಒತ್ತಡಕ್ಕೆ ಮಣಿದು ಈ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ( ಇದನ್ನೂ ಓದಿ: ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ )
ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಪರೇಶ್ ಸಾವಿನ ಪ್ರಕರಣವನ್ನು ಎನ್ಐಎಗೆ ವಹಿಸಲು ಕೋರಿ ಭಾರೀ ಪ್ರತಿಭಟನೆ ನಡೆಸಿದ್ದರು. ಅತ್ತ ಪರೇಶ್ ಮೇಸ್ತಾ ಅವರದ್ದು ಸಹಜ ಸಾವೆಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಿದ್ದರೂ, ಪರೇಶ್ ತಂದೆ ಕಮಲಾಕರ ಮೇಸ್ತಾ ಕೊಲೆ ಆರೋಪ ಮಾಡಿದ್ದಾರೆ. ( ಇದನ್ನೂ ಓದಿ: Exclusive: ವಿಷವುಣಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ – ಪರೇಶ್ ಮೇಸ್ತಾ ತಂದೆ ಹೇಳಿಕೆ )
ಪರೇಶ್ನನ್ನು ಅಪಹರಿಸಿ ಕೊಲೆ ಮಾಡಲಾಗಿದ್ದು, ಆತನ ಕೈಯಲ್ಲಿದ್ದ ಶಿವಾಜಿ ಟ್ಯಾಟುವನ್ನು ದುಷ್ಕರ್ಮಿಗಳು ಚಾಕುವಿನಿಂದ ಹಾಳು ಮಾಡಿದ್ದಾರೆ. ಪೊಲೀಸರು ಹೇಳುವಂತೆ, ಪರೇಶ್ ಮೇಸ್ತಾ ಕಾಲು ಜಾರಿ ಬಿದ್ದಿಲ್ಲ. ಆತನಿಗೆ ಚೆನ್ನಾಗಿಯೇ ಈಜು ಬರುತ್ತಿತ್ತು. ಸತ್ಯಾಸತ್ಯತೆ ಹೊರ ಬರಲು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದರು.