ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ(Paresh Mesta) ಸಾವನ್ನಪ್ಪುವ ಮೊದಲು ಕುಮಟಾದಲ್ಲಿ ನಡೆದ ಆಗಿನ ಸಿಎಂ ಸಿದ್ದರಾಮಯ್ಯ(Siddaramaiah) ಅವರ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದ ವಿಚಾರ ಸಿಬಿಐ(CBI) ತನಿಖೆಯಿಂದ ದೃಢಪಟ್ಟಿದೆ.
ಕುಮಟಾದಲ್ಲಿ ಡಿಸೆಂಬರ್ 6 ರಂದು ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಮೇಸ್ತಾ ಹೋಗಿದ್ದ. ಸುಮಾರು 25 ಕಿ.ಮೀ. ಪ್ರಯಾಣಿಸಿ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಪರೇಶ್ ಮೇಸ್ತಾ ಮನೆಗೆ ಬಂದಿದ್ದ. ನಂತರ ಮನೆಯಿಂದ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದ ಎಂಬ ವಿಚಾರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೊನ್ನಾವರ ನ್ಯಾಯಾಲಯಕ್ಕೆ(Honnavara Court) ಸಲ್ಲಿಸಿರುವ ವರದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೇಸ್ತಾ ಒಡನಾಡಿಗಳು, ಆತನ ಸ್ನೇಹಿತರು, ಘಟನೆ ನಡೆದ ಸಿಸಿಟಿವಿ ದೃಶ್ಯ, ಮೊಬೈಲ್ ಲೋಕೇಶನ್ ಸೇರಿ ಸಾಕಷ್ಟು ಸಾಕ್ಷ್ಯಗಳನ್ನು ಕೋರ್ಟ್ಗೆ ಸಲ್ಲಿಸಿದೆ.
ಪರೇಶ್ ಮೇಸ್ತಾ ಯಾವ ಹುಡುಗಿಯನ್ನೂ ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ಹೋಗಲು ತಂದೆಯ ಒಪ್ಪಿಗೆ ಪಡೆದುಕೊಂಡಿದ್ದ ವಿಚಾರವು ವರದಿಯಲ್ಲಿದೆ.
ಸಿಬಿಐ ಪರೇಶ್ ಮೇಸ್ತಾ ಅವರ ಆಪ್ತ ಸ್ನೇಹಿತರ ಹೇಳಿಕೆಯನ್ನು ದಾಖಲಿಸಿದೆ. ಪರೇಶ್ ಮೇಸ್ತ ಕೆಲವೊಮ್ಮೆ ಮದ್ಯ ಸೇವಿಸಿಯೂ ಮನೆಗೆ ಬರುತ್ತಿದ್ದ. ಆಗಾಗ ಸ್ನೇಹಿತನ ಮನೆಯಲ್ಲಿಯೇ ಇರುತ್ತಿದ್ದ. ಸ್ನೇಹಿತರ ಜತೆ ಸೇರಿಸಿಕೊಂಡು ಮೀನು ವ್ಯಾಪಾರ ಮಾಡುತ್ತಿದ್ದ ಎನ್ನುವುದು ಸೇರಿದಂತೆ ಅನೇಕ ಮಹತ್ವದ ವಿಷಯಗಳನ್ನು ಸಿಬಿಐ ತನಿಖೆ ತೆರೆದಿಟ್ಟಿದೆ.
ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ – ರಿಷಬ್ ಸಮರ್ಥನೆ ತಳ್ಳಿಹಾಕಿದ ನಟ ಚೇತನ್
ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ನಡೆದ ಕೋಮುಗಲಭೆಯಲ್ಲಿ ನಾಪತ್ತೆಯಾಗಿದ್ದ ಮೇಸ್ತಾ ಎರಡು ದಿನಗಳ ಬಳಿಕ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಬಿಜೆಪಿ ಸೇರಿ ಹಿಂದೂಪರ ಸಂಘಟನೆಗಳು ಅನ್ಯ ಕೋಮಿನವರೇ ಪರೇಶ ಮೇಸ್ತಾನನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತ್ತು.
ಬಿಜೆಪಿ ನಾಯಕರ ಆಗ್ರಹದಂತೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ ಸಿಬಿಐ ಕೆಲ ದಿನಗಳ ಹಿಂದೆಯಷ್ಟೇ ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ ಪರೇಶ್ ಮೇಸ್ತಾ ಅವರ ತಂದೆ ಆ ವರದಿಗೆ ಆಕ್ಷೇಪ ಎತ್ತಿದ್ದರು. ಮಗನನ್ನು ಕೊಲೆ ಮಾಡಲಾಗಿದೆ. ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಿಜೆಪಿ ಮುಖಂಡರು ಮರು ತನಿಖೆಗೆ ಆಗ್ರಹಿಸುವುದಾಗಿಯೂ ಹೇಳಿದ್ದರು.