ಮಂಡ್ಯ: ಮೈತ್ರಿ ಸರ್ಕಾರ ಬಿದ್ದು ಹೋದ ಬಳಿಕ ನಾವ್ಯಾಕೆ ಬಿಜೆಪಿಗೆ ಹೋಗಿಲ್ಲ ಅನಿಸುತ್ತಿತ್ತು. ಆದರೆ ಇದೀಗ ಅನರ್ಹ ಶಾಸಕರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ನಾವು ತೆಗೆದುಕೊಂಡ ನಿರ್ಧಾರವೇ ಸರಿ ಎಂದನಿಸುತ್ತಿದೆ ಅಂತ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಮಾಡಿದ ಒಂದು ಗಂಟೆಯಲ್ಲೇ ಸುಪ್ರೀಂಕೋರ್ಟಿನಿಂದ ತಡೆ ಕೊಡಿಸುತ್ತಾರೆ ಎಂದು ಹೇಳಿದರು. ಆದರೆ 24 ದಿನವಾದ್ರೂ ತಡೆ ಸಿಕ್ಕಿಲ್ಲ ಎಂದರು.
ಇದೇ ವೇಳೆ ನಿಮ್ಮನ್ನು ಬಿಜೆಪಿ ಸೇರುವಂತೆ ಕರೆದಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಎಲ್ಲರನ್ನೂ ಬಿಜೆಪಿಗೆ ಕರೆದಿದ್ದರು. ಇನ್ನು ನನ್ನನ್ನು ಬಿಡುತ್ತಾರಾ. ಈಗಿನ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆಗೆ ಸಿದ್ಧವಾಗೋದು ಒಳ್ಳೆಯದು. ಈಗಾಗಲೇ ನಮ್ಮ ವರಿಷ್ಠರು ಮಧ್ಯಂತರ ಚುನಾವಣೆಗೆ ತಯಾರಾಗುವಂತೆ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ತಾನು ತನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ದೇವೇಗೌಡ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಅಂಗೈಯಲ್ಲಿರುವ ಹುಣ್ಣಿಗೆ ಕನ್ನಡಿ ಯಾಕೆ ಬೇಕು. ಅದು ಸತ್ಯ. ಕಾಂಗ್ರೆಸ್ ಜೊತೆ ಹೋಗೋದು ತಪ್ಪು ಅಂತ ಮೊದಲೇ ವರಿಷ್ಠರಿಗೆ ಹೇಳಿದ್ದೆ. ಈ ಭಾಗದಲ್ಲಿ ಕಾಂಗ್ರೆಸ್ಸಿನವರೇ ನಮಗೆ ಪ್ರಬಲವಾಗಿ ಪೈಪೋಟಿ ಕೊಡೋದು. ಹಾಗಾಗಿ ಮೈತ್ರಿ ಬೇಡ ಅಂತ ಹೇಳಿದ್ದೆ. ಜಾತ್ಯಾತೀತ ತತ್ವದ ಮೇಲೆ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದರು. ಈಗ ನಾವು ಹೇಳಿದ್ದೇ ಸರಿ ಅಂತ ಅನಿಸಿರಬಹುದು ಎಂದರು.
ಹಳೇ ಮೈಸೂರು ಭಾಗದಲ್ಲೂ ಬಿಜೆಪಿ ಪ್ರಬಲಗೊಳಿಸುವ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಶಾಸಕರು, ಹೊಸದರಲ್ಲಿ ಆರಂಭ ಶೂರತ್ವ. ಅವರಿಗೆ ಹಳೇ ಮೈಸೂರು ಭಾಗದ ಬಗ್ಗೆ ಏನು ಗೊತ್ತು. ಈ ಭಾಗದ ಬಿಜೆಪಿ ನಾಯಕರಿಗೆ ಗೊತ್ತು. ಇಲ್ಲೆಲ್ಲ ಜೆಡಿಎಸ್ಗೆ ಕಾಂಗ್ರೆಸ್ ಶತ್ರು, ಕಾಂಗ್ರೆಸ್ಗೆ ಜೆಡಿಎಸ್ ಶತ್ರು ಎಂದು ಅವರು ಹೇಳಿದರು.