ಬೆಂಗಳೂರು: (Bengaluru) ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಸೋಮವಾರದಿಂದ ಜೆಸಿಬಿ ಘರ್ಜನೆಗೆ (Operation Bulldozer) ಬಿಬಿಎಂಪಿ (BBMP) ಮುಹೂರ್ತ ಫಿಕ್ಸ್ ಮಾಡಿದೆ. ಅದರೆ ಮಾರ್ಕಿಂಗ್ ಮಾಡಿರುವ ಜಾಗದಲ್ಲಿ ಕಿಡಿಗೇಡಿಗಳು ಪೇಂಟಿಂಗ್ ಮಾಡಿದ್ದು, ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ. ಸೋಮವಾರದ ರಾಜಕಾಲುವೆ ತೆರವು ಕಾರ್ಯಾಚರಣೆ ವಿವರ ಇಲ್ಲಿದೆ.
ರಾಜಕಾಲುವೆ ಒತ್ತುವರಿದಾರರ ವಿರುದ್ಧ ಬಿಬಿಎಂಪಿ ಸಮರ ಸಾರಿ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿತ್ತು. ಮಹಾದೇವಪುರದಲ್ಲಿ 15 ಕಡೆ ಮಾರ್ಕಿಂಗ್ ಮಾಡಿ 8 ವಲಯದಲ್ಲೂ ಆರಂಭದಲ್ಲಿ ಜೆಸಿಬಿಗಳು ಘರ್ಜಿಸಿ ಠುಸ್ ಪಟಾಕಿಯಾದವು. ಬಿಬಿಎಂಪಿ ಈ ನಡೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಯಿತು. ಬಡವರ ಮನೆ ಹೊಡೆದು ಶ್ರೀಮಂತರ ಮನೆ ಹೊಡೆಯದೇ ಇರೋದಕ್ಕೆ ವಿರೋಧ ವ್ಯಕ್ತವಾದ ಬಳಿಕ ಎಚ್ಚೆತ್ತಿರುವ ಬಿಬಿಎಂಪಿ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ನಾಳೆಯಿಂದ ಬೆಂಗಳೂರಿನ 8 ವಲಯದಲ್ಲೂ ತೆರವು ಕಾರ್ಯಾಚರಣೆ ಆರಂಭ ಮಾಡುವುದಾಗಿ ಯೋಜನೆ ಮಾಡಲಾಗಿದೆಯಂತೆ. ಇದನ್ನೂ ಓದಿ: ವಿಮ್ಸ್ ದುರಂತ: ಇಂದು ಸಚಿವ ಸುಧಾಕರ್ ಭೇಟಿ – ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ ಎಂದ ಶ್ರೀರಾಮುಲು
ಈ ಹಿಂದೆ ಮಹಾದೇವಪುರದ 15 ಕಡೆ ಬಿಬಿಎಂಪಿ ತೆರವು ಕಾರ್ಯ ಮಾಡಲು ಮುಂದಾಗಿತ್ತು. ಅದರಲ್ಲಿ ವಿಪ್ರೋ, ಎಪ್ಸಿಯಾನ್, ಇಕೋಸ್ಪೇಸ್, ಪೂರ್ವಾಂಕರ, ಬಾಗ್ಮನೆ, ಗೋಪಾಲನ್, ನಲಪಾಡ್ ಅಕಾಡೆಮಿ ಸೇರಿದಂತೆ ಹಲವು ಕಡೆ ಬಿಬಿಎಂಪಿ ಸುಮ್ಮನೆ ತೆರವು ಮಾಡೋ ಡ್ರಾಮ ಮಾಡಿತು. ಇದಕ್ಕೆ ಕಾರಣ ಮಾರ್ಕಿಂಗ್ ಮಾಡಿದ್ದ ಗುರುತನ್ನು ಅಳಿಸಿ ಹಾಕಿದ್ದಾರಂತೆ. ಜೊತೆಗೆ ಕಂದಾಯ ಅಧಿಕಾರಿಗಳು ವರ್ಗಾವಣೆ ಆಗಿರೋದು ಕೂಡ ಮಾರ್ಕಿಂಗ್ ಮಾಡಿರೋ ಜಾಗ ಗೊತ್ತಾಗದೇ ತೆರವು ಕಾರ್ಯಾಚರಣೆ ನಿಧಾನ ಆಗಿದೆ. ಮತ್ತೆ ಮರು ಸರ್ವೆ ಆಗಿದ್ದು, ಮಾರ್ಕಿಂಗ್ ಮಾಡಲಾಗಿದೆಯಂತೆ.
ಬೆಂಗಳೂರಿನ 8 ವಲಯದಲ್ಲೂ ಸೋಮವಾರದಿಂದ ಕಾರ್ಯಾಚರಣೆ ನಡೆಯಲಿದೆ. ಮಹಾದೇವಪುರದ ನಾಲ್ಕು ಕಡೆ ಮಾರ್ಕಿಂಗ್ ಮಾಡಿದ್ದು, ತೆರವು ಕಾರ್ಯಾಚರಣೆ ಮಾಡುತ್ತಾರಂತೆ. ಒಟ್ಟಾರೆ ಬಿಬಿಎಂಪಿ ಅಧಿಕಾರಿಗಳು ಮತ್ತೆ ತೆರವು ಕಾರ್ಯಾಚರಣೆ ಮಾಡುತ್ತೇನೆ ಅಂತಾ ಹೇಳುತ್ತಿದ್ದಾರೆ. ಈ ಬಾರಿ ತೆರವು ಕಾರ್ಯಾಚರಣೆಯಲ್ಲಿ ಬರೀ ಬಡವರ ಮನೆಗಳ ಟಾರ್ಗೆಟ್ ಆಗಿರುತ್ತಾ ಅಥವಾ ಶ್ರೀಮಂತರ ಮನೆ ಅಪಾರ್ಟ್ಮೆಂಟ್ಗಳನ್ನು ತೆರವು ಮಾಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಕೊತ್ವಾಲ್ ರಾಮಚಂದ್ರನ ಶಿಷ್ಯಂದಿರು ಇದ್ದಾರೆಂದು ಸಿದ್ದರಾಮಯ್ಯಗೆ ಭದ್ರತೆ ಹೆಚ್ಚಿಸಿದ್ದೇವೆ: ಸಿ.ಟಿ ರವಿ ಲೇವಡಿ