ಚಿತ್ರದುರ್ಗ: ರಾಜ್ಯ ಮೈತ್ರಿ ಸರ್ಕಾರ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಿಕೊಂಡು ಬರುತ್ತಿದೆ. ಆದರೆ ಸಾಲಮನ್ನಾ ಮಾತ್ರ ಕ್ರಮಬದ್ಧವಾಗಿ ಆಗುತ್ತಿಲ್ಲ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಚಿತ್ರದುರ್ಗ ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ರೈತರಿಬ್ಬರ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಜಮೆ ಆಗಿದೆ.
ಲಕ್ಷ್ಮೀಸಾಗರ ಗ್ರಾಮದ ರೈತರಾದ ಜಿ.ಉಮಾಪತಿ ಮತ್ತು ಬಿ.ಓ.ಹನುಮಂತಪ್ಪ ಅವರ ಖಾತೆಗೆ ಒಂದು ರೂ. ಜಮೆ ಆಗಿದೆ. ಹೀಗಾಗಿ ಆತಂಕಗೊಂಡ ರೈತರು ಇಂಡಿಯನ್ ಬ್ಯಾಂಕ್ ಹಾಗೂ ತಾಲೂಕು ಕಚೇರಿಗಳಿಗೆ ಅಲೆದಾಡುವಂತಾಗಿದೆ. ಬ್ಯಾಂಕ್ ಸಿಬ್ಬಂದಿ ಮಾತ್ರ ಯಾವುದೇ ಸಾಲಮನ್ನಾ ಆಗಿಲ್ಲ, ಹಣ ಪಾವತಿಸಿ ಎಂದಿದ್ದಾರೆ.
- Advertisement 2
- Advertisement 3
ಸಾಲಮನ್ನಾ ಆಗಲಿದೆ ಎಂದು ರೈತರು ಬಡ್ಡಿ ಸೇರಿದಂತೆ ಯಾವ ಹಣವನ್ನೂ ಪಾವತಿಸಿಲ್ಲ. ಒಂದು ವೇಳೆ ಬ್ಯಾಂಕ್ ಬಡ್ಡಿ ಸೇರಿದಂತೆ ಹಣ ಪಾವತಿಸಿ ಅಂದರೆ ಏನು ಮಾಡೋದು ಎಂದು ರೈತರು ಆತಂಕದಲ್ಲಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಾಲಮನ್ನಾವನ್ನು ಯೋಜನಬದ್ಧವಾಗಿ ಮಾಡಬೇಕು. ಯೋಜನೆಯಲ್ಲಿ ತಾಂತ್ರಿಕ ದೋಷಗಳು ಬಾರದಂತೆ ಕಾಳಜಿ ವಹಿಸುವ ಮೂಲಕ ಸರ್ಕಾರ ನೀಡಿರುವ ಸಾಲಮನ್ನಾ ಯೋಜನೆಯನ್ನು ಅನ್ನದಾತರ ಖಾತೆಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ರೈತರಿಗೆ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.