ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಜನರಲ್ಲಿ ಕೊರೊನಾ (Corona) ಭೀತಿ ಕಡಿಮೆಯಾಗಿದೆ. ನವರಾತ್ರಿ ಕಳೆದು ಇದೀಗ ದೇಶಾದ್ಯಂತ ಜನರು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ ಇದರ ನಡುವೆಯೇ ಕರ್ನಾಟಕಕ್ಕೆ (Karnataka) ಓಮಿಕ್ರಾನ್ (Omicron) ಉಪತಳಿ BQ.1ನ ಭೀತಿ ಹುಟ್ಟಿಕೊಂಡಿದೆ.
ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ (Maharashtra) ಒಮಿಕ್ರಾನ್ ರೂಪಾಂತರಿ BQ.1 ತಳಿ ಪತ್ತೆಯಾಗಿದ್ದು, ಇದೀಗ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ (Health Department) ಸೂಚನೆ ನೀಡಿದೆ.
ದೀಪಾವಳಿ, ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದ್ದು, ಈ ವೇಳೆ ರೋಗ ಹರಡುವ ಭೀತಿಯೂ ಹುಟ್ಟಿಕೊಂಡಿದೆ. ಈ ಹಿನ್ನೆಲೆ ಜ್ವರ, ಕೆಮ್ಮು, ನೆಗಡಿಯ ಲಕ್ಷಣ ಇರುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಉಸಿರಾಟದ ಸಮಸ್ಯೆ ಇರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್ ಬ್ರಿಟನ್ ರಾಜ 3ನೇ ಚಾರ್ಲ್ಸ್ಗಿಂತಲೂ ಶ್ರೀಮಂತ
ಏರ್ ಕಂಡೀಷನ್ ಇರುವ ಜಾಗ, ಒಳಾಂಗಣ ಪ್ರದೇಶ, ಆರೋಗ್ಯ ಸಂಸ್ಥೆಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಬೂಸ್ಟರ್ ಡೋಸ್ ಪಡೆಯಲು ಬಾಕಿ ಇರುವವರು ಕಡ್ಡಾಯವಾಗಿ ಪಡೆಯಬೇಕು. ಉಳಿದಂತಹ ಸಿಎಬಿ ನಿಯಮವನ್ನು ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದೆ.
ಅಮೆರಿಕದಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿದ್ದ ಓಮಿಕ್ರಾನ್ ಉಪತಳಿ BQ.1 ಕಳೆದ ವಾರ ಭಾರತದಲ್ಲಿ ಮೊದಲ ಬಾರಿ ಪತ್ತೆಯಾಗಿದೆ. ಪುಣೆ ಮೂಲದ ವ್ಯಕ್ತಿಯೊಬ್ಬರ ಕೊರೊನಾ ಸ್ಯಾಂಪಲ್ನ ಜಿನೋಮ್ ಪರೀಕ್ಷೆ ವೇಳೆ ಈ ಹೊಸ ಓಮಿಕ್ರಾನ್ ಉಪತಳಿ ಪತ್ತೆಯಾಗಿದೆ. ಇದನ್ನೂ ಓದಿ: 5 ದಿನದಲ್ಲಿ ಮತ್ತೆ ಗೂಗಲ್ಗೆ ಭಾರತ ದಂಡ – 936 ಕೋಟಿ ಫೈನ್ ಹಾಕಿದ ಸಿಸಿಐ