ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಜೀವನ ಮಾಡುತ್ತಿದ್ದ ಆ ಅಂಧರ ಕುಟುಂಬಕ್ಕೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಂಟಕವಾಗಿ ಮಾರ್ಪಟ್ಟಿದೆ. ಈ ಅಂಧರ ಜೀವನೋಪಾಯಕ್ಕಿದ್ದ ಏಕೈಕ ಟೀ ಅಂಗಡಿಯನ್ನ ಅಧಿಕಾರಿಗಳು ಕುಂಟು ನೆಪವೊಡ್ಡಿ ಎತ್ತಂಗಡಿ ಮಾಡಿಸಿದ್ದಾರೆ.
ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ತಾಲೂಕಿನ ದಾಬಸ್ಪೇಟೆಯಲ್ಲಿ ನಡೆದಿದೆ. ಇಲ್ಲಿನ ಲೋಕೇಶ್ ಎಂಬವರ ಕುಟುಂಬ ಸಾಕಷ್ಟು ವರ್ಷಗಳಿಂದ ಟೀ ಮಾರುತ್ತಾ ನೆಮ್ಮದಿಯ ಜೀವನವನ್ನ ನಡೆಸುತ್ತಿದ್ದರು. ಕುಟುಂಬದ ಎಲ್ಲಾ ಸದಸ್ಯರಿಗೂ ಸಂಪೂರ್ಣ ಕಣ್ಣು ಕಾಣದೆ ಕೇವಲ ಶೇ.20ರಷ್ಟು ಮಾತ್ರ ಕಾಣುತ್ತದೆ. ಹೀಗಿದ್ದರೂ ಸ್ವಾಭಿಮಾನದ ಬದುಕನ್ನ ಬಿಟ್ಟುಕೊಡದ ಇವರೆಲ್ಲಾ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ, ಜೀವನೋಪಾಯಕ್ಕಾಗಿ ಟೀ ಅಂಗಡಿಯೊಂದನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಆದ್ರೆ ಇದೀಗ ಕೆ.ಐ.ಎ.ಡಿ.ಬಿ ಸಂಸ್ಥೆ ಅಂಧರು ಇಟ್ಟುಕೊಂಡಿದ್ದ ಟೀ ಅಂಗಡಿಯನ್ನ ಎತ್ತಂಗಡಿ ಮಾಡಿದ್ದು, ಇವರ ಜೀವನ ಇದೀಗ ಬೀದಿಪಾಲಾಗಿದೆ. ಹೀಗಾಗಿ ನಮಗೆ ಇಲ್ಲಿನ ಅಧಿಕಾರಿಗಳು ಮತ್ತೆ ಟೀ ಅಂಗಡಿಯನ್ನ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಅಂಧ ಲೋಕೇಶ್ ಕುಟುಂಬ ಪರಿಪರಿಯಾಗಿ ಮಾಧ್ಯಮದಗಳ ಮುಂದೆ ಬೇಡಿಕೊಳ್ಳುತ್ತಿದ್ದಾರೆ.
ಈ ವಿಚಾರದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಜನಪ್ರತಿಧಿಗಳ ಮುಂದೆ ಅಂಗಲಾಚಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಅಂತ ಕುಟುಂಬದ ಹನುಮಕ್ಕ ತನ್ನ ಅಳಲು ತೋಡಿಕೊಂಡಿದ್ದಾರೆ.