ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರಿಂಗ್ ಹುದ್ದೆಯ ಸಾಮಾನ್ಯ ಪತ್ರಿಕೆಯ ಮರು ಪರೀಕ್ಷೆ ಡಿ.29ಕ್ಕೆ ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ.
ಹಾಸನ-ಸೋಲಾಪುರ ಎಕ್ಸ್ ಪ್ರೆಸ್ ಮತ್ತು ಉದ್ಯಾನ್ ಎಕ್ಸ್ ಪ್ರೆಸ್ ರೈಲು ತಡವಾಗಿದ್ದರಿಂದ ಕಲಬುರಗಿ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ.
ಈ ಕುರಿತು ಮಾಧ್ಯಮ ಪ್ರಕಟನೆಯನ್ನು ಹೊರಡಿಸಿದ್ದು, ಕಲಬುರಗಿ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗಿನ ಅಧಿವೇಶನದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಮಧ್ಯಾಹ್ನದ ಅಧಿವೇಶನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಸಾಮಾನ್ಯ ಪತ್ರಿಕೆ-1 ರ ಮರು ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ರೈಲು ವಿಳಂಬ – ಅಭ್ಯರ್ಥಿಗಳಿಗೆ ಟ್ರಾಫಿಕ್ ರಹಿತ ಸಾರಿಗೆ ವ್ಯವಸ್ಥೆ
ದಾಖಲೆ ಸಲ್ಲಿಸಬೇಕು?
ಈ ಪರೀಕ್ಷೆ ಬರೆಯಬೇಕಾದರೆ ಅಭ್ಯರ್ಥಿಗಳು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಮನವಿ ಪತ್ರ, ಹಾಸನ-ಸೋಲಾಪುರ ಎಕ್ಸ್ ಪ್ರೆಸ್ ಮತ್ತು ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಸಂಬಂಧ ಟಿಕೆಟ್ ಪ್ರತಿ ಮತ್ತು ಆಯೋಗ ನೀಡಿರುವ ಪ್ರವೇಶ ಪತ್ರದ ಪ್ರತಿಯನ್ನು ಮಧ್ಯಾಹ್ನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಡಿ.22ರ ಒಳಗಡೆ ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರಿಗೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಒಂದು ವೇಳೆ ಈ ದಾಖಲೆಗಳನ್ನು ಸಲ್ಲಿಸಲು ಅಭ್ಯರ್ಥಿಗಳು ವಿಫಲವಾದರೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮುಖಾಂತರ ಅಥವಾ ಖುದ್ದಾಗಿ ಕೇಂದ್ರ ಕಛೇರಿಗೆ ಬಂದು ಅಥವಾ ಇಮೇಲ್ ಮುಖಾಂತರ ಸಲ್ಲಿಸಬಹುದು
ನಡೆದಿದ್ದೇನು?
ಹಾಸನ-ಸೋಲಾಪುರ ಸೂಪರ್ ಫಾಸ್ಟ್, ಉದ್ಯಾನ್ ರೈಲು ಬೆಳಗ್ಗೆ 6 ಗಂಟೆಗೆ ಕಲಬುರಗಿ ನಗರಕ್ಕೆ ಬರಬೇಕಿತ್ತು. ಆದ್ರೆ ತಾಂತ್ರಿಕ ತೊಂದರೆಯಿಂದ ರೈಲುಗಳು ಬೆಳಗ್ಗೆ 6 ಗಂಟೆ ಬದಲಾಗಿ ಮಧ್ಯಾಹ್ನ 1:30ಕ್ಕೆ ಕಲಬುರಗಿ ತಲುಪಿತ್ತು. ಹೀಗಾಗಿ ಪಿಡಬ್ಲ್ಯೂಡಿ, ಎಹಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳು ಪರದಾಡಿದ್ದರು. ಇದರಿಂದ ಎಚ್ಚೆತ್ತ ಪರೀಕ್ಷೆ ಕೇಂದ್ರ ಕೆಪಿಎಸ್ಸಿ ರೈಲು ವಿಳಂಬವಾದ ಅಭ್ಯರ್ಥಿಗಳಿಗೆ ಪರೀಕ್ಷೆ ಸಮಯ ಬದಲಾವಣೆ ಮಾಡಿತ್ತು. ಬೆಳಗ್ಗೆ 11 ಗಂಟೆಯ ಪತ್ರಿಕೆ ಹಾಜರಾಗಲು ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲದ ಕಾರಣ ಮಧ್ಯಾಹ್ನ 2 ಗಂಟೆಗೆ ಎರಡನೇ ಪರೀಕ್ಷೆ ಹಾಜರಾಗಲು ಅಭ್ಯರ್ಥಿಗಳಿಗೆ ಕಲಬುರಗಿ ಪೊಲೀಸರು ವ್ಯವಸ್ಥೆ ಮಾಡಿಕೊಟ್ಟರು. ಇದನ್ನೂ ಓದಿ: ಕ್ಯಾ. ವರುಣ್ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟ: ಸಿಎಂ