– ಅಪಘಾತವಾದ್ರೆ ಆರೋಗ್ಯ ಕೇಂದ್ರ, ಶೌಚಾಲಯಗಳು ಎಲ್ಲಿವೆ?
ರಾಮನಗರ: ಬಿಜೆಪಿ ಸರ್ಕಾರ (BJP Government) ಜನಸಾಮಾನ್ಯರ ಲೂಟಿ ಮಾಡ್ತಿದೆ. ಹಲವೆಡೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದಾರೆ. ಕಾಮಗಾರಿ ಪೂರ್ಣವಾಗದೇ ಪ್ರಧಾನಮಂತ್ರಿಗಳ ಕೈಯಲ್ಲಿ ಹೆದ್ದಾರಿ ಉದ್ಘಾಟನೆ ಮಾಡಿಸಿದ್ದಾರೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ.
ಸರ್ವೀಸ್ ರಸ್ತೆ ಪೂರ್ಣವಾಗದೇ ವಸೂಲಿ ಮಾಡುತ್ತಿರುವ ಟೋಲ್ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿಖಿಲ್, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಗರಂ ಆದರು. ಬಿಡದಿ ಬಳಿ ಸಮರ್ಪಕ ಸರ್ವಿಸ್ ರಸ್ತೆ ನಿರ್ಮಾಣ ಮಾಡಿಲ್ಲ. ಕೇವಲ 20ಕಿ.ಮೀ ಸಂಚರಿಸಲು ದುಬಾರಿ ಶುಲ್ಕ ಕಟ್ಟಬೇಕಾಗಿದೆ. ಇದು ಬಿಜೆಪಿ ಸರ್ಕಾರದ ಹಗಲು ದರೋಡೆ ಎಂದು ವಾಗ್ದಾಳಿ ನಡೆಸಿದರು.
ಸಂಸದ ಪ್ರತಾಪ್ ಸಿಂಹ (Pratap Simha) ಇದಕ್ಕೆ ಉತ್ತರ ಕೊಡಬೇಕು. ಉದ್ಘಾಟನೆ ಆದ ಮೂರೇ ದಿನಕ್ಕೆ ಬಿಡದಿ ಬಳಿ ಹೆದ್ದಾರಿ ಕಿತ್ತುಬಂದಿದೆ. ಇದು ಸಣ್ಣ ನ್ಯೂನ್ಯತೆ ಅಂತ ಪ್ರತಾಪ್ ಸಿಂಹ ಹೇಳ್ತಾರೆ. ಆದರೆ ಪೂರ್ಣವಾಗದೇ ಟೋಲ್ ವಸೂಲಿ ಮಾಡೋದು ನ್ಯೂನ್ಯತೆ ಅಲ್ವಾ ಎಂದು ಸಿಂಹ ವಿರುದ್ಧವೂ ಕಿಡಿಕಾರಿದರು. ಇದನ್ನೂ ಓದಿ: ನನ್ನನ್ನು ಕ್ಷಮಿಸಿ ಬಿಡಿ ಯೋಗಿಜಿ ಫಲಕದೊಂದಿಗೆ ಠಾಣೆಗೆ ಶರಣಾದ ಬೈಕ್ ಕಳ್ಳ
ಪ್ರತಾಪ್ ಸಿಂಹ ಅವರ ಬದ್ಧತೆ ಇಂದು ಕನ್ನಡ ಜನತೆಯ ಪರವಾಗಿ ಏನಿದೆ ಎಂಬುದು ಇವರು ನಡೆದುಕೊಳ್ಳುವ ರೀತಿಯಲ್ಲಿ ಗೊತ್ತಾಗುತ್ತದೆ. ನಿನ್ನೆ ಪ್ರತಾಪ್ ಸಿಂಹ ಅವರು ಮನೆ ಕಟ್ಟಿದ ಬಳಿಕವೇ ಪ್ಲಂಬಿಂಗ್, ಎಲೆಕ್ಟ್ರಿಕ್ ಸಮಸ್ಯೆ ಅನ್ನೋದು ಉದ್ಭವವಾಗುತ್ತದೆ. ಇನ್ನು ರಸ್ತೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಬರುತ್ವೆ ಎಂದು ಹೇಳಿದರು. ಹಂಗಾದ್ರೆ ಟೋಲ್ ಕಲೆಕ್ಷನ್ ಯಾಕೆ ಮಾಡುತ್ತಿದ್ದೀರಿ..?. ತಾಂತ್ರಿಕೆ ದೋಷಗಳೇನು ಇವೆ. ಮೊದಲು ಅವುಗಳನ್ನು ಸರಿಪಡಿಸಿಕೊಳ್ಳಿ. ಆ ಬಳಿಕವೇ ಟೋಲ್ ಕಲೆಕ್ಟ್ ಮಾಡಿ ಎಂದು ನಿಖಿಲ್ ವಾಗ್ದಾಳಿ ನಡೆಸಿದರು.
ರಸ್ತೆಯಲ್ಲಿ ಓಡಾಡುವಾಗ ಮಧ್ಯದಲ್ಲಿ ಏನಾದ್ರೂ ಅಪಘಾತವಾದಾರೆ ಅಥವಾ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಲ್ಲಿವೆ?, ಸ್ವಚ್ಛ ಬಾರತ್ ಬಗ್ಗೆ ಹೇಳುತ್ತಿರುವ ಬಿಜೆಪಿಯವರೇ ಶೌಚಾಲಯ ವ್ಯವಸ್ಥೆಗಳು ಎಲ್ಲಿವೆ..?. ಯಾವ ಅನುಕೂಲಗಳು ಇಲ್ಲ. ಪ್ರಯಾಣಿಕರ ಮೇಲೆ ನೇರವಾಗಿ 20 ರೂ. ಹೆಚ್ಚಿನ ಹಣವನ್ನು ತಲೆ ಮೇಲೆ ಹಾಕುತ್ತಿದ್ದಾರೆ.
ಜನಸಾಮಾನ್ಯರು ಪ್ರತಿನಿತ್ಯ ಬಳಸುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಾಗಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಜನಸಾಮಾನ್ಯರಿಗೆ ಅನುಕೂಲ ಏನು ಎಂಬುದನ್ನು ಜನವೇ ಪ್ರಶ್ನೆ ಮಾಡುತ್ತಿದ್ದಾರೆ.
ನಿಖಿಲ್ ನೇತೃತ್ವದಲ್ಲಿ ವಾಹನಗಳ ಅಡ್ಡಗಟ್ಟಲು ಕಾರ್ಯಕರ್ತರು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ರಸ್ತೆ ತಡೆದ ಕಾರ್ಯಕರ್ತರನ್ನ ಬಂಧಿಸಿದರು.