ಚಿಕ್ಕಮಗಳೂರು: ಪ್ರೇಮ ವಿವಾಹವಾಗಿ ಆರೇ ತಿಂಗಳಿಗೆ ನವವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ತರಿಕೆರೆ ತಾಲೂಕಿನ ಶಿವನಿ ಸಮೀಪದ ದಂದೂರು ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನ ಲತಾ(19) ಎಂದು ಗುರುತಿಸಲಾಗಿದೆ. ದಂದೂರಿನ ನಿವಾಸಿಯಾಗಿದ್ದ ಲತಾ ಅದೇ ಊರಿನ ಧರ್ಮರಾಜ್ನನ್ನು ಪ್ರೀತಿಸುತ್ತಿದ್ದಳು. ಲತಾಳ ಪ್ರೀತಿ ಆಕೆಯ ಅಪ್ಪ-ಅಮ್ಮನಿಗೆ ಇಷ್ಟರವಿರಲಿಲ್ಲ. ಆದ್ರೆ, ಧರ್ಮರಾಜ್ ಪೋಷಕರು ಮುಂದೆ ನಿಂತು ತರೀಕೆರೆಯ ಕಲ್ಲತ್ತಿಗಿರಿ ದೇವಾಲಯದಲ್ಲಿ ಇಬ್ಬರಿಗೂ ಮದುವೆ ಮಾಡಿದ್ದರು.
ಮದುವೆಯಾದ ಆರೇ ತಿಂಗಳಿಗೆ ಲತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ, ಮೃತ ಲತಾಳ ಪೋಷಕರು ಲತಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ನೇಣು ಬಿಗಿದುಕೊಂಡಿರುವ ಆಕೆಯ ಕಾಲುಗಳು ನೆಲದ ಮೇಲೆಯೇ ಇವೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಗೆ ಲತಾ ಪೋಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.