ಮುಂಬೈ: ಮಹಾರಾಷ್ಟ್ರದ ಶಾಸಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರು ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಸ್ತುತ ಜೈಲಿನಲ್ಲಿರುವ ಇಬ್ಬರೂ ರಾಜಕೀಯ ನಾಯಕರು ಶುಕ್ರವಾರ ನೀಡಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಹೈಕೋರ್ಟ್ ಈ ಇಬ್ಬರು ನಾಯಕರಿಗೆ ಮತದಾನ ಮಾಡಲು ಜೈಲಿನಿಂದ ಹೊರಗೆ ಹೋಗಲು ಅನುಮತಿಯನ್ನು ನಿರಾಕರಿಸಿತ್ತು.
ಇದೀಗ ಈ ಇಬ್ಬರು ನಾಯಕರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಚುನಾಯಿತ ಪ್ರತಿನಿಧಿಯಾಗಿ ಮತದಾನದ ಶಾಸನಬದ್ಧ ಹಕ್ಕು ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಅರೆಸ್ಟ್
20 ವರ್ಷಗಳ ಹಿಂದೆ ಮುಂಬೈನ ಕುರ್ಲಾದಲ್ಲಿ 2.75 ಎಕರೆ ಜಾಗಕ್ಕಾಗಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್ಗೆ ನವಾಬ್ ಮಲಿಕ್ 55 ಲಕ್ಷ ರೂ. ನಗದು ನೀಡಿದ್ದರು ಎಂದು ಜಾರಿ ನಿರ್ದೇಶನಾಲಯ (ಇಡಿ) ಮಾಹಿತಿ ಕಲೆಹಾಕಿತ್ತು. ಇದು ಅಕ್ರಮ ಹಣ ವರ್ಗಾವಣೆ ಎಂಬ ಆರೋಪದಡಿ ಇಡಿ ಮಲಿಕ್ರನ್ನು ಬಂಧಿಸಿತ್ತು.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಸಿಬಿಐ ಬಂಧಿಸಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ್ಯಾಪಿಡ್ ಆಕ್ಷನ್ ಫೋರ್ಸ್ನಿಂದ ಪಂಥ ಸಂಚಲನ