ಚೆನ್ನೈ: ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಅಪರಾಧಿಗಳನ್ನು 31 ವರ್ಷಗಳ ಜೈಲುವಾಸದ ನಂತರ ಬಿಡುಗಡೆ ಮಾಡಲಾಯಿತು. ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ (Supreme Court) ಆದೇಶ ಹೊರಡಿಸಿದ ಒಂದು ದಿನದ ನಂತರ ಅವರನ್ನು ಇಂದು ರಿಲೀಸ್ ಮಾಡಲಾಗಿದೆ.
ಅಪರಾಧಿಗಳಾಗಿದ್ದ ನಳಿನಿ ಶ್ರೀಹರನ್ (Nalini Sriharan), ಅವರ ಪತಿ ಮುರುಗನ್ ಮತ್ತು ಸಂತನ್ ಅವರನ್ನು ಶನಿವಾರ ಸಂಜೆ ಬಿಡುಗಡೆ ಮಾಡಲಾಯಿತು. ಪೆರೋಲ್ ಷರತ್ತುಗಳ ಭಾಗವಾಗಿ ನಳಿನಿ ಇಂದು ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಕೇಸ್ – ಸುಪ್ರೀಂ ತೀರ್ಪು ಸ್ವಾಗತಿಸಿದ ಸ್ಟಾಲಿನ್
ಮೇ ತಿಂಗಳಲ್ಲಿ, ಏಳನೇ ಅಪರಾಧಿ ಪೆರಾರಿವಾಲನ್ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತ್ತು. ಅದೇ ಆದೇಶವು ಉಳಿದ ಅಪರಾಧಿಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಕ್ಯಾಬಿನೆಟ್ 2018 ರಲ್ಲಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ರಾಜ್ಯಪಾಲರು ಬದ್ಧರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿತ್ತು.
1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ನಳಿನಿ ಅವರಲ್ಲದೆ, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಆರ್ಪಿ ರವಿಚಂದ್ರನ್ ಅವರು ಜೈಲು ಪಾಲಾಗಿದ್ದರು. “ಅಪರಾಧಿಗಳು ತೃಪ್ತಿದಾಯಕ ನಡವಳಿಕೆ ತೋರಿದ್ದಾರೆ. ಪದವಿಗಳನ್ನು ಪಡೆದಿದ್ದು, ಪುಸ್ತಕಗಳನ್ನು ಬರೆದಿದ್ದಾರೆ. ಸಮಾಜ ಸೇವೆಯಲ್ಲಿ ಭಾಗವಹಿಸಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ರಾಜೀವ್ಗಾಂಧಿ ಹತ್ಯೆ – ಜೀವಾವಧಿ ಶಿಕ್ಷೆಗೊಳಗಾದ 6 ಮಂದಿಯ ಬಿಡುಗಡೆಗೆ ಸುಪ್ರೀಂ ಆದೇಶ
ನಳಿನಿ ಶ್ರೀಹರನ್ ಅವರ ಸಹೋದರ ಬಾಕಿನಾಥನ್ ಮಾತನಾಡಿ, ಅಪರಾಧಿಗಳು ಈಗಾಗಲೇ ಮೂರು ದಶಕಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಜೈಲಿನಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಮಾನವೀಯತೆ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರ ಬಿಡುಗಡೆಯನ್ನು ವಿರೋಧಿಸುವವರು ಭಾರತದ ಕಾನೂನನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ. ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.