ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ಎನ್ ಮಹೇಶ್ ಅವರು ಈಗಾಗಲೇ ರಾಜೀನಾಮೆ ನೀಡಿದ್ದು, ಇವರ ಹಠಾತ್ ರಾಜೀನಾಮೆಯ ಅಸಲಿ ಕಾರಣ ಇದೀಗ ಪಬ್ಲಿಕ್ ಟಿವಿಗೆ ದೊರೆತಿದೆ.
ಮಹೇಶ್ ರಾಜೀನಾಮೆಗೆ ಕಳೆದೊಂದು ವಾರದಿಂದ ತೆರೆಮರೆಯಲ್ಲಿ ಕಸರತ್ತುಗಳು ನಡೆದಿದ್ದವು. ಈ ಮೂಲಕ ಮಾಯಾವತಿ ಅವರು ಲೋಕಸಭಾ ಚುನಾವಣಾ ಸಂದರ್ಭದ ಲಾಭ ಪಡೆಯಲು ಸಂಚು ರೂಪಿಸಿದ್ದಾರಂತೆ. ಎಲ್ಲಾ ರಾಜ್ಯಗಳಲ್ಲೂ ಬಿಎಸ್ಪಿ ಅಭ್ಯರ್ಥಿಗಳನ್ನು ಲೋಕಸಭಾ ಕಣಕ್ಕಿಳಿಸಲು ತಯಾರಿ ನಡೆಸಲಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಕೊಳ್ಳೇಗಾಲ ಶಾಸಕ ಮಹೇಶ್ ಅವರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ಬೆನ್ನಲ್ಲೇ ಕೋಡಿ ಶ್ರೀ ಭವಿಷ್ಯ
ಬಿಎಸ್ಪಿ ನಾಯಕಿ ಮಾಯಾವತಿ ಅವರು ಮಹೇಶ್ ಗೆ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ವಾರದ ಹಿಂದೆಯೇ ಸೂಚಿಸಿದ್ದರಂತೆ. ಆದ್ರೆ ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಹಿಂದೇಟು ಹಾಕಿದ್ದರು. ಮಹೇಶ್ ಅವರ ಈ ನಡೆ ಕಂಡಿದ್ದ ಮಾಯಾವತಿ, ನೇರವಾಗಿ ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡಿದ್ದರು. ಮಹೇಶ್ರಿಂದ ರಾಜೀನಾಮೆ ಪಡೆಯಿರಿ ಇಲ್ಲವೆ ಸಂಪುಟದಿಂದ ಕೈಬಿಡಿ ಎಂದಿದ್ದರು. ಇದನ್ನೂ ಓದಿ: ಸಚಿವ ಮಹೇಶ್ ರಾಜೀನಾಮೆ – ಎಲ್ಲವನ್ನೂ ಬಹಿರಂಗವಾಗಿ ಹೇಳೋಕಾಗಲ್ಲ: ಸಿಎಂ ಎಚ್ಡಿಕೆ
ಮಾಯಾವತಿ ಜೊತೆಗಿನ ಮಾತುಕತೆಯನ್ನು ವಾರದ ಹಿಂದೆಯೇ ಸಿಎಂ ಅವರು ಮಹೇಶ್ಗೆ ತಿಳಿಸಿದ್ದರು. ಹೀಗಾಗಿ ಸಿಎಂ ಎಚ್ಡಿಕೆ ಹಾಗೂ ಮಾಯಾವತಿ ಒತ್ತಡಕ್ಕೆ ಸಿಲುಕಿ ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಚಿವ ಎನ್.ಮಹೇಶ್ ರಾಜೀನಾಮೆ ನೀಡಲು ಕಾರಣ ಏನು?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv