ಮೈಸೂರು: ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಹಿಡಿದಿದ್ದ ವಿದ್ಯಾರ್ಥಿನಿಗೆ ಪೊಲೀಸರು ಸತತ 7:45 ಗಂಟೆ ವಿಚಾರಣೆ ಮಾಡಿದ್ದಾರೆ.
ವಿದ್ಯಾರ್ಥಿ ನಳಿನಿ ಶುಕ್ರವಾರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು, ಪ್ರತಿಯನ್ನು ಠಾಣೆಗೆ ನೀಡಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಹೇಳಿಕೆ ದಾಖಲಿಸಲು ಜಯಲಕ್ಷೀಪುರಂ ಠಾಣೆಗೆ ಬೆಳಗ್ಗೆ ಹಾಜರಾಗಿದ್ದರು. ಡಿಸಿಪಿ ಮುತ್ತುರಾಜ್ ಹಾಗೂ ಎಸಿಪಿ ಶಿವಶಂಕರ್ ಅವರು ಬೆಳಗ್ಗೆ 10ರಿಂದ ಸಂಜೆ 5.45 ಗಂಟೆ ವೆರಗೂ ಸತತ 7:45 ಗಂಟೆ ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ಒಟ್ಟು 80 ಪ್ರಶ್ನೆ ಕೇಳಲಾಗಿದ್ದು, ಇದರಲ್ಲಿ ಕೆಲವೊಂದು ಪ್ರಶ್ನೆಗಳನ್ನು ಹೊರತುಪಡಿಸಿ ಎಲ್ಲಾ ಪ್ರಶ್ನೆಗಳಿಗೂ ನಳಿನಿ ಉತ್ತರಿಸಿದ್ದಾರೆ. ಸದ್ಯಕ್ಕೆ ಮೊದಲ ಹಂತದ ವಿಚಾರಣೆ ಮುಗಿದಿದ್ದು, ಅವಶ್ಯಕತೆ ಇದ್ದರೆ ಮತ್ತೆ ವಿಚಾರಣೆಗೆ ಕರೆಯುತ್ತಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ವಿಚಾರಣೆ ಬಳಿಕ ಹೊರ ಬಂದ ನಳಿನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ನಾನು ನನ್ನ ಹೇಳಿಕೆಯನ್ನು ಪತ್ರಿಕೆ ಹಾಗೂ ವಿಡಿಯೋ ಮೂಲಕ ಹೇಳಿದ್ದೇನೆ. ಅದನ್ನು ಬಿಟ್ಟು ಬೇರೆ ಏನು ಹೇಳುವುದಿಲ್ಲ. ಬೇರೆ ಏನು ಕೇಳಬೇಡಿ. ನಾನು ಏನನ್ನೂ ಹೇಳುವುದಿಲ್ಲ. ಪೊಲೀಸರ ವಿಚಾರಣೆಗೆ ಸಹಕರಿಸುತ್ತೇನೆ. ಮತ್ತೇನು ಹೇಳುವುದಿಲ್ಲ ಎಂದರು.