ಮೈಸೂರು: ದಸರಾ (Mysuru Dasara) ಮೆರವಣಿಗೆಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರೋ ಗಜಪಡೆಯ ಸದಸ್ಯೆ 22 ವರ್ಷದ ಲಕ್ಷ್ಮಿ (Lakshmi) ನಿನ್ನೆ(ಮಂಗಳವಾರ) ಗಂಡು ಮರಿಗೆ ಜನ್ಮ ನೀಡಿದೆ.
ದಸರಾ ವೇಳೆ ಗಜಪಡೆಯ ಸದಸ್ಯೆ ಮರಿ ಹಾಕುತ್ತಿರುವ ಎರಡನೇ ಪ್ರಸಂಗವಿದು. ಲಕ್ಷ್ಮಿಯ ಪುತ್ರನನ್ನು ಕಂಡು ಗಜಪಡೆಯ ಮಾವುತರು, ಕಾವಾಡಿಗಳು, ಅರಣ್ಯಾಧಿಕಾರಿಗಳು ಖುಷಿಯಾಗಿದ್ದಾರೆ. 15 ವರ್ಷಗಳ ಹಿಂದೆ ದಸರಾ ಗಜಪಡೆಯ ಸದಸ್ಯೆಯಾಗಿ ಬಂದಿದ್ದ ಸರಳ ಆನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಮರಿಗೆ ಚಾಮುಂಡಿ (Chamundi) ಎಂದು ಹೆಸರಿಡಲಾಗಿತ್ತು.
ಲಕ್ಷ್ಮಿ ಆನೆ 2017 ರಲ್ಲಿ ಮೊದಲ ಬಾರಿಗೆ ನಾಡಹಬ್ಬದ ಮೆರವಣಿಗೆಗೆ ಕಾಡಿ ನಿಂದ ನಾಡಿಗೆ ಬಂದಿತ್ತು. ಆಗ ಸಿಡಿಮದ್ದಿನ ಶಬ್ದಕ್ಕೆ ಲಕ್ಷ್ಮಿ ಬೆಚ್ಚುತ್ತಿದ್ದ ಕಾರಣ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಈಗ ಎರಡನೇ ಬಾರಿಗೆ ಲಕ್ಷ್ಮಿಯನ್ನು ನಾಡಹಬ್ಬದ ಮೆರವಣಿಗೆಗೆ ಕರೆಸಲಾಗಿದೆ. ಮೊನ್ನೆ ನಡೆದ ಸಿಡಿಮದ್ದಿನ ತಾಲೀಮಿನ ವೇಳೆ ಶಬ್ಧಕ್ಕೆ ಬೆಚ್ಚದ್ದೆ ನಿಂತು ಕೊಂಡಿತ್ತು. ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಈ ಬಾರಿ ದಸರಾ ಉದ್ಘಾಟನೆ – ಸಿಎಂ
ನಿನ್ನೆ ಮಧ್ಯಾಹ್ನ ಲಕ್ಷ್ಮಿ ವರ್ತನೆಯಲ್ಲಿ ಬದಲಾವಣೆ ಕಂಡಿತ್ತು. ಆಗ ವೈದ್ಯರು ಆನೆಯನ್ನು ಪರೀಕ್ಷಿಸಿದ್ದಾಗ ಲಕ್ಷ್ಮಿ ತುಂಬು ಗರ್ಭಿಣಿ ಎಂಬುದು ಗೊತ್ತಾಗಿದೆ. ತಕ್ಷಣ ಲಕ್ಷ್ಮಿಯನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಿನ್ನೆ ರಾತ್ರಿ 8.10ಕ್ಕೆ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಈ ಮರಿಗೆ ಗಣಪತಿ (Ganapathi) ಎಂದು ನಾಮಕರಣ ಮಾಡಲು ಚಿಂತನೆ ಮಾಡಲಾಗಿದೆ.