ಮಂಡ್ಯ: ಅಕ್ರಮ ಖಾತೆಯನ್ನು ಸಕ್ರಮ ಮಾಡಿಕೊಡದ್ದಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪುರಸಭೆಯ ಸಿಬ್ಬಂದಿಯನ್ನು ಕೊಲೆ ಮಾಡಲು ಪುರಸಭೆ ಮಾಜಿ ಸದಸ್ಯೆಯ ಪತಿ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಶ್ರೀರಂಗಪಟ್ಟಣದ ಪುರಸಭೆಯ ಕಂದಾಯ ಇಲಾಖೆಯ ಸಿಬ್ಬಂದಿ ರಾಜು ಹತ್ಯೆಗೆ ಪುರಸಭೆ ಮಾಜಿ ಸದಸ್ಯೆ ಪದ್ಮಮ್ಮ ಅವರ ಪತಿ ಭಾರತೀಸುತ ಮುಂದಾಗಿದ್ದಾನೆ ಎಂದು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಸುತನಿಗೆ ಕಂದಾಯ ಇಲಾಖೆಯ ಸಿಬ್ಬಂದಿ ರಾಜು ಅಕ್ರಮ ಖಾತೆಯನ್ನು ಸಕ್ರಮ ಮಾಡಿಕೊಟ್ಟಿಲ್ಲ ಎಂದು ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಗುರುವಾರ ಶ್ರೀರಂಗಪಟ್ಟಣದಲ್ಲಿ ನಾನು ನಡೆದುಕೊಂಡು ಹೋಗುವ ವೇಳೆ ಭಾರತೀಸುತ ಬೈಕ್ನಲ್ಲಿ ಹಿಂದೆಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ರಾಜು ಅವರು ಆರೋಪಿಸಿದ್ದಾರೆ.
ರಾಜು ಅವರಿಗೆ ಡಿಕ್ಕಿ ಹೊಡೆದು ಭಾರತೀಸುತ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದಿಂದ ರಾಜು ಅವರ ಕಾಲಿಗೆ ಪೆಟ್ಟಾಗಿದ್ದು, ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾರತೀಸುತನ ವಿರುದ್ಧ ಪ್ರಕರಣ ದಾಖಲಾಗಿದೆ.