ಶಿವಮೊಗ್ಗ: ಕ್ರಿಕೆಟ್ ಆಡುತ್ತಿದ್ದ ವೇಳೆ ಕುಸಿದು ಬಿದ್ದ ಪರಿಣಾಮ ನಗರಸಭೆಯ ಗುತ್ತಿಗೆ ನೌಕರನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಭದ್ರಾವತಿ ನಗರಸಭೆಯ ವಾಟರ್ ಸಪ್ಲೆಯರ್ ದಿನೇಶ್ ರಾವ್ (38) ಎಂದು ಗುರುತಿಸಲಾಗಿದೆ.
ಭದ್ರಾವತಿ ನಗರಸಭೆ ವತಿಯಿಂದ ನಗರಸಭೆಯ ಕಾರ್ಮಿಕರು ಹಾಗು ಸಿಬ್ಬಂದಿಯವರಿಗೆ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ನಗರಸಭೆಯಲ್ಲಿ ವಾಟರ್ ಸಪ್ಲೆಯರ್ ಆಗಿ ಕಳೆದ 7 ವರ್ಷಗಳಿಂದ ಗುತ್ತಿಗೆ ಆಧಾರದ ನೌಕರನಾಗಿ ದಿನೇಶ್ ರಾವ್ ಸೇವೆ ಸಲ್ಲಿಸುತ್ತಿದ್ದರು. ಇದನ್ನೂ ಓದಿ: ಪೆಟ್ರೋಲ್ಗಾಗಿ ಕ್ಯೂ ನಿಂತ ಜನರಿಗೆ ಟೀ, ಬನ್ ನೀಡಿದ ಮಾಜಿ ಕ್ರಿಕೆಟಿಗ
ದಿನೇಶ್ ರಾವ್ ಅವರು ಎಲ್ಲರಂತೆ ಕ್ರಿಕೆಟ್ ಆಟದಲ್ಲಿ ಭಾಗವಹಿಸಿದ್ದರು. ಕ್ರಿಕೆಟ್ ಆಡುತ್ತಿದ್ದ ವೇಳೆಯಲ್ಲಿ ದಿನೇಶ್ ರಾವ್ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ದಿನೇಶ್ಗೆ ಸ್ಥಳದಲ್ಲಿಯೇ ಇದ್ದ ಆರೋಗ್ಯ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿದರು. ದಿನೇಶ್ ರಾವ್ ಕುಸಿದು ಬಿದ್ದ ಕ್ಷಣಾರ್ಧದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದೃಡೀಕರಿಸಿದರು. ನಂತರ ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದು ಮರಣೋತ್ತರ ಶವ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.