ಶಿವಮೊಗ್ಗ : ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಅನ್ಯಾಯ ಎಸಗಿದ್ದಾರೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರೆ ಹಾನಿ ಉಂಟಾಗಿದ್ದರೂ ಒಂದು ಪೈಸೆ ಕೊಡುವುದಕ್ಕು ಅವರು ಬಾಯಿ ಬಿಡಲಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರಧಾನಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೋದಿ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಪರಿಹಾರ ಕೇಳಿದರೂ ಮೋದಿ ಸಾರ್ವಜನಿಕವಾಗಿ ಒಂದೇ ಒಂದು ಉತ್ತರ ನೀಡಲಿಲ್ಲ. ರಾಜ್ಯದ ಬಗ್ಗೆ ಮೋದಿಗೆ ಗೌರವವಿಲ್ಲ, ಮಮತೆ ಇಲ್ಲ, ವಿಶ್ವಾಸವಿಲ್ಲ. ಇಂತಹ ಒಬ್ಬ ಪ್ರಧಾನಿ ಹೊಂದಿರುವುದು ನಮ್ಮ ರಾಷ್ಟ್ರದ ದೌರ್ಭಾಗ್ಯ. ಹೀಗಾಗಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ನಾಚಿಕೆ ಆಗಬೇಕು. ಸಾರ್ವಜನಿಕರ ಎದುರಿಗೆ ಪರಿಹಾರ ಕೇಳಿದರೂ ಕೊಡದೇ ಇಲ್ಲಿನ ಸರ್ಕಾರವನ್ನು ಮೋದಿ ಲಘುವಾಗಿ ಕಂಡಿದ್ದಾರೆ. ಈ ಸರ್ಕಾರದ ಬಗ್ಗೆ ಅವರಿಗೆ ಗೌರವವಿಲ್ಲ. ಹೀಗಾಗಿ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿ ಕೊಳೆಯುತ್ತ ಬಿದ್ದಿದ್ದಾರೆ ಎಂದು ಕಾಗೋಡು ಆಕ್ರೋಶ ವ್ಯಕ್ತಪಡಿಸಿದ್ದರು.