ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ ಸಿಸಿಬಿಗೆ ವರ್ಗಾವಣೆ ಮಾಡಿ ಅದೇಶ ನೀಡಲಾಗಿದೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ರಿಂದ ಕೇಸ್ ಸಿಸಿಬಿ ವರ್ಗಾವಣೆ ಮಾಡಿ ಆದೇಶ ನೀಡಿದ್ದು, ಸಿಸಿಬಿ ಡಿಸಿಪಿ ರವಿಕುಮಾರ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆಗಸ್ಟ್ 12ರ ತಡರಾತ್ರಿ ಸತೀಶ್ ರೆಡ್ಡಿ ಮನೆಯ ಆವರಣಕ್ಕೆ ನುಗ್ಗಿದ್ದ ಮೂವರು ದುಷ್ಕರ್ಮಿಗಳ ತಂಡ, ಮನೆಯ ಬಳಿಯಿದ್ದ ಕಾರುಗಳಿಗೆ ಬೆಂಕಿಯಿಟ್ಟು ಎಸ್ಕೇಪ್ ಆಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೊಮ್ಮನಹಳ್ಳಿ ಪೊಲೀಸರು, ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಎರಡು ದಿನದಲ್ಲಿ ಸಾಗರ್, ನವೀನ್, ಶ್ರೀಧರ್ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!
ವಿಚಾರಣೆ ವೇಳೆ ಮೂವರು ಆರೋಪಿಗಳಿಗೆ ಲಾಕ್ಡೌನ್ ವೇಳೆ ಕೆಲಸವಿಲ್ಲದೇ ಪರದಾಡಿದ್ರು, ನಂತರ ಯಾವುದೇ ಕೆಲಸವಿಲ್ಲದೇ ಶಾಸಕರ ಬಳಿ ಹೋಗಿ ಕೆಲಸ ಕೊಡಿಸುವಂತೆ ಮನವಿ ಮಾಡಲು ಮೂರು ಬಾರಿ ಮನೆಯ ಬಳಿ ಹೋಗಿ ಇಡೀ ದಿನ ಭೇಟಿಗಾಗಿ ಕಾದಿದ್ದರಂತೆ ಆದರೆ ಶಾಸಕರನ್ನು ಭೇಟಿಗೆ ಅವಕಾಶಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋಪಗೊಂಡು ಮೂವರು ಕಂಠಪೂರ್ತಿ ಕುಡಿದು ಸತೀಶ್ ರೆಡ್ಡಿ ಮನೆ ಬಳಿ ಬಂದು ಮನೆಯ ಬಳಿಯಿದ್ದ ಕಾರುಗಳಿಗೆ ಬೆಂಕಿ ಹಾಕಿ ಎಸ್ಕೇಪ್ ಆಗಿದ್ರು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಇದನ್ನೂ ಓದಿ: ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ- ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ
ಸತೀಶ್ ರೆಡ್ಡಿ ಮಾತ್ರ ಇದು ಸುಳ್ಳು, ಕಾರಿಗೆ ಬೆಂಕಿ ಹಾಕಿರುವ ಹಿಂದೆ ಬೇರೆ ವ್ಯಕ್ತಿಗಳ ಕೈವಾಡವಿದೆ. ಪೊಲೀಸರು ಸರಿಯಾಗಿ ತನಿಖೆ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಬೊಮ್ಮನಹಳ್ಳಿ ಪೊಲೀಸರು ಈಗಾಗಲೇ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸತೀಶ್ ರೆಡ್ಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಸಿಸಿಬಿಗೆ ಕೇಸ್ ವರ್ಗಾವಣೆ ಮಾಡಲಾಗಿದೆ.