ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಕಾರ್ಯ ವೈಖರಿ ಬಗ್ಗೆ ಅವಾಚ್ಯ ಪದಗಳಲ್ಲಿ ವಿದ್ಯಾರ್ಥಿ ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಕಾಲೇಜು ವೇದಿಕೆಯಲ್ಲಿ ಶಾಸಕ ಸಾರಾ ಮಹೇಶ್ ಕಣ್ಣೀರು ಹಾಕುತ್ತಾ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ಕ್ಷೇತ್ರದ ಸರಕಾರಿ ಕಾಲೇಜು ಕಟ್ಟಡ ಉದ್ಘಾಟನೆ ವಿಚಾರವಾಗಿ ಅವಹೇಳಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿ ಪೋಸ್ಟ್ ಹಾಕಿದ್ದ. ಕಾಲೇಜು ಕಟ್ಟಡ ಉದ್ಘಾಟಿಸಿ ಕಾಲೇಜು ವೇದಿಕೆಯಲ್ಲೇ ಕಣ್ಣೀರು ಹಾಕಿದ ಶಾಸಕ ಸಾ.ರಾ. ಮಹೇಶ್, ವಿದ್ಯಾರ್ಥಿ ಹಾಕಿದ್ದ ಪೋಸ್ಟ್ ಓದುತ್ತಾ ವಿದ್ಯಾರ್ಥಿಗೆ ಎಚ್ಚರಿಕೆ ನೀಡಿದರು. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದರೂ ಯಾಕೆ ಈ ರೀತಿ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇಂತಹ ಆಯೋಗ್ಯನನ್ನು ಇಟ್ಟುಕೊಂಡಿದ್ದರಲ್ಲ ಎಂದು ಪ್ರಾಂಶುಪಾಲರಿಗೆ ಪ್ರಶ್ನಿಸಿದರು. ನಾನು ಮನಸ್ಸು ಮಾಡಿದ್ರೆ ಸಸ್ಪಂಡ್ ಮಾಡಿಸುತ್ತಿದ್ದೆ. ನಮ್ಮ ಅಪ್ಪ-ಅಮ್ಮ ನನಗೆ ಸಂಸ್ಕಾರ ಕಲಿಸಿದ್ದಾರೆ. ನಾನು ನಿಮ್ಮ ಜಾತಿಯವನಲ್ಲ ಎಂಬ ಕಾರಣಕ್ಕೆ ಕೆಟ್ಟ ಪದ ಉಪಯೋಗಿಸಿದ್ದೀರಾ. ನನಗೂ ಸ್ವಾಭಿಮಾನ ಇದೆ. ಪ್ರತಿ ನಿತ್ಯ ಟಿಫನ್ ಬಾಕ್ಸ್ ತೆಗೆದುಕೊಂಡು ಹೋಗುವ ಮೂಲಕ ವಿದ್ಯಾರ್ಥಿಗಳ ರೀತಿ ಕೆಲಸ ಮಾಡುತ್ತಿದ್ದೇನೆ. ಇಷ್ಟೆಲ್ಲ ಕೆಲಸ ಮಾಡಿದ್ದೇನೆ. ಮನಃಸಾಕ್ಷಿ ಬೇಡ ನಿಮಗೆ ಎಂದು ಕಣ್ಣೀರು ಹಾಕುತ್ತಾ ಪ್ರಶ್ನಿಸಿದರು. ಇದನ್ನೂ ಓದಿ: ನಾಳೆಯಿಂದ ಲಾಲ್ಬಾಗ್ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ
ನಾನು ನಿಮಗೆ ಏನು ಅನ್ಯಾಯ ಮಾಡಿದ್ದೇನೆ. ಜಿಲ್ಲಾ ಪಂಚಾಯ್ತಿಯಲ್ಲಿ ಮೂರು ಬಾರಿ ಗೆದ್ದು ಏನೇನು ಮಾಡಿದ್ದಾನೆ ಅಂತ ಕೇಳು ಹೋಗಿ, ಹುಷಾರ್ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು. ನನಗೂ ಇವನಷ್ಟುದ್ದದ ಮಗನಿದ್ದಾನೆ. ಮೊದಲನೇಯವನು ಅವರ ಅಮ್ಮನ ರೀತಿ ಒಳ್ಳೆಯವನು. ಎರಡನೇಯವನು ನನ್ ಥರಾ ಕೆಟ್ಟವನು ಹುಷಾರ್ ಎಂದು ಹೇಳಿದರು.
ನನಗೆ ಬೈರಿ, ನನ್ನ ತಾಯಿಗೆ ಬೈದ್ರೆ ಹೇಗೆ ಎಂದು ಪ್ರಶ್ನಿಸಿದರು. ಎಷ್ಟು ನೋಯಿಸಿದ್ರು ಅಷ್ಟೇ ಪಣ್ಯಾತ್ಮರು ನನ್ನ ಕೈ ಹಿಡಿಯುತ್ತಾರೆ. ನಿನ್ನಂತವರು ಎಷ್ಟು ಬೊಗಳಿದ್ರು ನಾನು ಏನೂ ಆಗಲ್ಲ. ನಾನು ಹುಟ್ಟುತ್ತಲೇ ಶ್ರೀಮಂತ ಅಲ್ಲ, ಸೈಕಲ್ ಹೊಡ್ಕೊಂಡೆ ಬೆಳೆದದ್ದು. ದೇವರು ನನ್ನ ಚೆನ್ನಾಗಿ ಇಟ್ಟಿದ್ದಾನೆ. ವಿದ್ಯಾರ್ಥಿಗಳು ಸೈಕಲ್ ಮತ್ತು ಸ್ಕೂಟರ್ ಗಳನ್ನ ಸ್ಟ್ಯಾಂಡ್ ನಲ್ಲೇ ನಿಲ್ಲಿಸಬೇಕು. ಕಾಲೇಜಿನ ಕಾರಿಡಾರ್ ನಲ್ಲಿ ಕಂಡ್ರೆ ನೀವ್ ಹುಬ್ಬಳ್ಳಿ, ಅಥವಾ ಧಾರವಾಡದಲ್ಲಿರ್ತೀರಾ ಎಂದು ಹೇಳುತ್ತಾ ವೇದಿಕೆಯಲ್ಲೇ ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದರು.