ಮಂಡ್ಯ: 2028ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ (BJP) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮಗೆ ಅಧಿಕಾರಕ್ಕೆ ಬರುವುದು ಮುಖ್ಯವೇ ಹೊರತು ಸಿಎಂ ಯಾರಾಗಬೇಕು ಎಂಬುದು ಮುಖ್ಯವಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಹೇಳಿದ್ದಾರೆ.
ನಮ್ಮೆಲ್ಲರ ಹೆಮ್ಮೆಯ ನಾಯಕ ಶ್ರೀ ನರೇಂದ್ರ ಮೋದಿ ಜಿ ಅವರು ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಹಾಗೂ ಆದಿಚುಂಚನಗಿರಿ ಪವಿತ್ರ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ರಾಜ್ಯದ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ.
ಈ ಮಹತ್ವದ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ, ಪೂಜ್ಯ ನಿರ್ಮಲಾನಂದ ಶ್ರೀಗಳೊಂದಿಗೆ ಸವಿಸ್ತಾರವಾಗಿ ಸಿದ್ಧತೆಗಳನ್ನು… pic.twitter.com/043Vm5kQc4
— R. Ashoka (@RAshokaBJP) April 14, 2026
ನಾಳೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಇಂದು ಶ್ರೀಕ್ಷೇತ್ರಕ್ಕೆ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿರ್ಮಲಾನಂದನಾಥ ಸ್ವಾಮೀಜಿಗಳೊಂದಿಗೆ ಸಿದ್ಧತೆ ಪರಿಶೀಲಿಸಿದರು. ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ತುಂಬಾ ಜನರಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2028ಕ್ಕೆ ರಾಜ್ಯದಲ್ಲಿ ಜೆಡಿಎಸ್ಎಸ್-ಬಿಜೆಪಿ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದ ಅವರು, ಸಂಸತ್ತಿನಲ್ಲೂ ಜೆಡಿಎಸ್ಗೆ ಮೂರ್ನಾಲ್ಕು ಸ್ಥಾನಗಳನ್ನು ನೀಡಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಮೈತ್ರಿ ಮುಂದುವರಿಯಲಿದೆ ಎಂದು ಹೇಳಿದರು.
ಸಿಎಂ ರೇಸ್ನಲ್ಲಿ ಯಾರಿದ್ದಾರೆ?
ಸಿಎಂ ಯಾರಾಗಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ನಿತಿನ್ ನಬೀನ್ ಅವರು ನಿರ್ಧರಿಸುತ್ತಾರೆ. ನನ್ನನ್ನೂ ಸೇರಿದಂತೆ ಈಗಾಗಲೇ 10 ಮಂದಿಯ ಹೆಸರುಗಳು ಕೇಳಿಬಂದಿದೆ. ನಮಗೆ ಅಧಿಕಾರಕ್ಕೆ ಬರುವುದೇ ಮುಖ್ಯ. ಜೊತೆಗೆ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರ ತೊಲಗುವುದು ಮುಖ್ಯ ಎಂದು ಹೇಳಿದರು.

ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ವಿಚಾರ ಅವಧಿ ಮುಗಿದ ಮೆಡಿಸಿನ್ ರೀತಿ ಆಗಿದೆ. ನಿನ್ನೆಯೂ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋಗಿ ಸಿಎಂ ಮಾಡುವಂತೆ ಡಿ.ಕೆ ಶಿವಕುಮಾರ್ ಜಗಳವಾಡಿ ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ. ಒಂದು ವರ್ಷದಿಂದ ಸಿಎಂ. ಬದಲಾವಣೆ ಜಗಳ, ಕಿತ್ತಾಟದಲ್ಲೇ ಕಳೆದುಹೋಗಿದೆ ಎಂದು ಟೀಕಿಸಿದರು.
ಪಕ್ಷದ ಅಧ್ಯಕ್ಷರಿಗೆ ಗೌರವ ಸಿಕ್ಕಿದ್ದರೆ 30 ರಿಂದ 40 ಶಾಸಕರು ಯಾಕೆ ದೆಹಲಿಗೆ ಹೋಗುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಶಾಸಕರು ಡಿಕೆಶಿ ಮಾತಿಗೆ ಬೆಲೆ ಕೊಡುತ್ತಿಲ್ಲ. ಕಾಂಗ್ರೆಸ್ ಪಾರ್ಟಿ ಜಗಳಗಳ ಪಾರ್ಟಿಯಾಗಿದೆ. ಸಿಎಂ. ಹಾಗೂ ಸಚಿವ ಸ್ಥಾನದ ಆಸೆ ಇಟ್ಟುಕೊಂಡವರ ಜಗಳ ಶುರು ಮಾಡಿದ್ದಾರೆ. ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ ಎಂದು ಲೇವಡಿಗೈದರು.

