ಹಾವೇರಿ: ರಾಜ್ಯದಲ್ಲಿ ಇನ್ನೂ ಆರು ಜನರನ್ನು ಮಂತ್ರಿ ಮಾಡಲು ಅವಕಾಶವಿದೆ. ಹೀಗಾಗಿ ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳಿಗೆ ಸಿಎಂ ಒತ್ತು ಕೊಡುತ್ತಾರೆ ಎನ್ನುವ ಭರವಸೆ ಇದೆ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಇತ್ತೀಚೆಗೆ ಸಿಎಂ ಭೇಟಿ ಮಾಡಿದಾಗ ಮುಂದಿನ ಬಾರಿ ನೋಡೋಣ ಎಂದು ಹೇಳಿದ್ದಾರೆ. ಹೀಗಾಗಿ ಈ ಬಾರಿ ನನಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಯಡಿಯೂರಪ್ಪನವರಿಗೆ ವಯಸ್ಸಾದರೂ ಇನ್ನೂ ಮೂರುವರೆ ವರ್ಷ ಅಧಿಕಾರ ಮಾಡುತ್ತಾರೆ. ಅವರು ಅಧಿಕಾರ ಮಾಡುವುದಿಲ್ಲ ಎನ್ನುವ ಹಾಗಿಲ್ಲ. ಸಿ.ಎಂ.ಉದಾಸಿ ಅವರಿಗೆ 85 ವಯಸ್ಸು ಆಗಿದೆ. ಅದರೂ ಯುವಕರಂತೆ ಓಡಾಡುತ್ತಾರೆ. ಬಿ.ಎಸ್.ಯಡಿಯೂರಪ್ಪನವರು ಸಹ ಅದೇ ರೀತಿ ಕೆಲಸ ಮಾಡಿ ದಾಖಲೆ ನಿರ್ಮಿಸುತ್ತಾರೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ, ಅವರೇ ನಮ್ಮ ನಾಯಕರು ಎಂದು ಓಲೆಕಾರ ತಿಳಿಸಿದ್ದಾರೆ.