ಕೊಪ್ಪಳ: ಕಳೆದ ಒಂದು ವಾರದಿಂದ ಕಣ್ಮರೆಯಾಗಿದ್ದ ಅತೃಪ್ತ ಶಾಸಕ ಆನಂದ್ ಸಿಂಗ್ ಅವರು ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೂಂದಿ ಬಳಿಯಿರುವ ವ್ಯಾಸರಾಯರ ವೃಂದಾವನಕ್ಕೆ ಭೇಟಿ ನೀಡಿದ್ದಾರೆ.
ಹಂಪಿ ನವ ವೃಂದಾವನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳು ನಾಳೆ ನಡೆಯುವ ಅಧಿವೇಶನದ ವಿಶ್ವಾಸ ಮತದಲ್ಲಿ ಭಾಗಿಯಾಗುವ ಕುರಿತು ಕೇಳಿದಾಗ ಶಾಸಕರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದ್ದು, ಯಾವುದೇ ಸ್ಪಷ್ಟತೆ ನೀಡಿಲ್ಲ. ಬದಲಾಗಿ ಕಾದು ನೋಡಿ ಏನಾಗುತ್ತೆ ಎಂದು ಹೇಳಿದ್ದಾರೆ.
ಇಂದು ಮುಂಜಾನೆ ಭೇಟಿ ನೀಡಿದ ಶಾಸಕರು ಯತಿವರ್ಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಆರೋಪಿಗಳ ಬಂಧನದ ಬಗ್ಗೆ ಪೊಲೀಸರ ಜೊತೆಯೂ ಚರ್ಚೆ ನಡೆಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ನಿಧಿ ಚೋರರಿಂದ ವ್ಯಾಸರಾಯರ ವೃಂದಾವನ ಧ್ವಂಸ ಗೊಂಡಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಂಗ್, ಧ್ವಂಸ ಮಾಡಿದವರನ್ನ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಇದೇ ವೇಳೆ ಒತ್ತಾಯಿಸಿದ್ದಾರೆ.