ಮಂಡ್ಯ: ಇಂದು ಬೆಳಗ್ಗೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕ್ಕೊಳಗಾಗಿದ್ದ ತಹಶೀಲ್ದಾರ್ ರವರು ಕೆ.ಆರ್.ಪೇಟೆಯ ತೆಂಡೇಕೆರೆ ಗ್ರಾಮದ ಬಳಿ ಪತ್ತೆಯಾಗಿದ್ದಾರೆ.
ತಹಶೀಲ್ದಾರ್ ಮಹೇಶ್ ಚಂದ್ರರವರು ಪತ್ತೆಯಾಗಿರುವ ಕುರಿತು ಖುದ್ದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗಳಾದ ಅಮಿತ್ ಸಿಂಗ್ ರವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಮಹೇಶ್ ಚಂದ್ರರವರು ಸದ್ಯ ಕೆ.ಆರ್.ಪೇಟೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಖುದ್ದು ತಹಶೀಲ್ದಾರರಾದ ಮಹೇಶ್ ಚಂದ್ರರವರು ಕೆ.ಆರ್.ಪೇಟೆ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಅಲ್ಲದೇ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ. ವೆಂಕಟೇಶಯ್ಯ ಅವರಿಂದ ತಹಶೀಲ್ದಾರ್ ಮಹೇಶ್ ಚಂದ್ರರ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ವೇಳೆ ಇಂದು ಬೆಳಗ್ಗೆ ಎರಡು ಮೋಟಾರ್ ಬೈಕುಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನನ್ನನ್ನು ಅಪಹರಣ ಮಾಡಿ, ತೆಂಡೇಕೆರೆ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ ಎಂದು ಮಹೇಶ್ ಚಂದ್ರರವರು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕೆ.ಆರ್.ಪೇಟೆಯ ತಹಶೀಲ್ದಾರ್ ಅಪಹರಣ
ತಹಶೀಲ್ದಾರ್ ಮಹೇಶ್ ಚಂದ್ರರವರ ಯೋಗಕ್ಷೇಮವನ್ನು ವಿಚಾರಿಸಲು ಶಾಸಕ ಡಾ.ನಾರಾಯಣಗೌಡರವರು ಠಾಣೆಗೆ ಆಗಮಿಸಿದ್ದಾರೆ. ಅಲ್ಲದೇ ನಾಪತ್ತೆಯಾಗಿದ್ದ ತಹಶೀಲ್ದಾರ್ ನೋಡಲು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ನೂರಾರು ಸಾರ್ವಜನಿಕರು ಜಮಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews