ಬಳ್ಳಾರಿ: ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಬುಲೆಟ್ ಟ್ರೈನ್ ಇದ್ದ ಹಾಗೆ, ಅದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಜನಪರವಾದ ಕೆಲಸ ಮಾಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಬುಲೇಟ್ ಟ್ರೈನ್ ಇದ್ದ ಹಾಗೆ, ಅದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಅಭಿವೃದ್ಧಿ ಮಾಡಬೇಕು, ಒಳ್ಳೆಯ ಆಡಳಿತ ನೀಡಬೇಕು, ಜನಪರ ಕಾರ್ಯಕ್ರಮಗಳನ್ನು ನೀಡಬೇಕೆಂದು ರಾಜ್ಯದುದ್ದಕ್ಕೂ ಪ್ರವಾಸ ಮಾಡುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಅನೇಕ ಸುಧಾರಣೆ ಕೆಲಸಗಳನ್ನು ಮಾಡುತ್ತಿದ್ದೇವೆ. ಬೊಮ್ಮಯಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಎಲ್ಲರೂ ಸೇರಿ ಕೆಲಸ ಮಾಡಿ, ಸಿಎಂ ಬೊಮ್ಮಾಯಿ ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೈಲಿಗೆ ಬಂದು ಸಾಕಷ್ಟು ಓದುವುದನ್ನು ಕಲಿತೆ, ಇದು ನನ್ನ ಜೀವನದಲ್ಲಿ ಅತೀ ದೊಡ್ಡ ಬದಲಾವಣೆ: ವಿನಯ್ ಕುಲಕರ್ಣಿ
ಸಾರಿಗೆ ನೌಕರರು ವೇತನ ಪರಿಷ್ಕರಣೆ ಮಾಡಲಾಗುವುದು. ಎರಡು ತಿಂಗಳ ಸಂಬಳ ಬಾಕಿ ಇದೆ. ಎರಡು ಮೂರು ದಿನಗಳಲ್ಲಿ ಅವರಿಗೆ ಸಂಬಳ ನೀಡಲಾಗುವುದು. ಸಾರಿಗೆ ಇಲಾಖೆ ನೋ ಪ್ರಾಫಿಟ್, ನೋ ಲಾಸ್ ನಲ್ಲಿ ಕೆಲಸ ಮಾಡಬೇಕಿದೆ. ನನ್ನ ಶಕ್ತಿ ಮೀರಿ ಸಾರಿಗೆ ಇಲಾಖೆಯ ಅಭಿವೃದ್ಧಿಗಾಗಿ ಶ್ರಮಿಸುವೆ. ಬೇರೆ ರಾಜ್ಯಗಳಿಗೆ ಸಂಚರಿಸುತ್ತಿದ್ದ ಐರಾವತ ಬಸ್ಗಳು ನಿಂತಿವೆ. ಅಲ್ಲದೆ ಕೆಂಪು ಬಸ್ಗಳು ಸಹ ಹಲವು ಖಾಲಿ ಹೋಗುತ್ತಿವೆ. ಖಾಲಿ ಹೋಗುತ್ತಿರುವ ಬಸ್ಗಳು ಹಾಗೂ ಒಬ್ಬಿಬ್ಬರು ಪ್ರಯಾಣಿಕರಿರುವ ಬಸ್ಗಳನ್ನು ಓಡಿಸದಂತೆ ಎಂಡಿ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಕೇಂದ್ರ ಸರ್ಕಾರದಿಂದ 800 ಎಲೆಕ್ಟ್ರಿಕ್ ಬಸ್ ಹಾಗೂ ರಾಜ್ಯ ಸರ್ಕಾರದಿಂದ 600 ಎಲೆಕ್ಟ್ರಿಕ್ ಬಸ್ಗಳನ್ನು ಶೀಘ್ರವೇ ಖರೀದಿಸಲಾಗುವುದು. ಅಲ್ಲದೆ ಯಾವುದೇ ನೌಕರರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕಿದೆ ಎಂದು ತಿಳಿಸಿದರು.
ಸಚಿವ ಆನಂದ್ ಸಿಂಗ್ ಅವರು ನನ್ನ ಸ್ನೇಹಿತರು, ಪಕ್ಷಕ್ಕೆ ಮುಜುಗರ ಆಗುವ ಕೆಲಸವನ್ನು ಮಾಡುವುದಿಲ್ಲ. ಆ ನಂಬಿಕೆ ನನಗೆ ಇದೆ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ಸಿಎಂ ಜೊತೆ ಚರ್ಚಿಸಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಒಂದು ಒಡೆದ ಮನೆಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದವರು, ನಮ್ಮ ಸರ್ಕಾರಕ್ಕೆ ಆಪತ್ತು ಬಂದಾಗ ಅವರೆಲ್ಲ ಒಂದಾಗುತ್ತಾರೆ. ಕಾಂಗ್ರೆಸ್ ನವರು ದೆಹಲಿಗೆ ಹೋದಾಗ ಮಾತ್ರ ಒಂದಾಗುತ್ತಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂದೆ ಮಾತ್ರ ಕೈ ಕೈ ಹಿಡಿಯುತ್ತಾರೆ. ಫೋಟೋಗೆ ಪೋಸ್ ನೀಡುತ್ತಾರೆ. ಆದರೆ ನಾವೆಲ್ಲ ಒಂದಾಗಿದ್ದೇವೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದರು.