ಶಿವಮೊಗ್ಗ: ಕನ್ನಡಿಗರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಚಿರಋಣಿ ಎಂದು ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ಕುಟುಂಬದ ನೋವು ನಿವಾರಿಸಲು ನನ್ನ ಕೈಲಾದ ಸಹಾಯ ಮಾಡಲು ಮುಂದಾಗಿದ್ದೆ, ಆದರೆ ಮೃತ ದೇಹದ ಪತ್ತೆ ಮಾಡುವ ವೇಳೆ ನನ್ನ ಕಾಲು ಜಾರಿ ಬಂಡೆಗಳ ನಡುವೆ ಸಿಲುಕಿಕೊಳ್ಳಬೇಕಾಯಿತು. ಆದರೆ ನಾನು ಅಲ್ಲಿಂದ ಮತ್ತೆ ಹತ್ತಿ ಬರಲು ಪ್ರಯತ್ನಿಸಿದೆ ಸದಾ ನೀರು ಹರಿಯುವ ಕಾರಣ ನನ್ನ ಪ್ರಯತ್ನ ವಿಫಲವಾಯಿತು. ಇಂತಹ ಸನ್ನಿವೇಶಗಳನ್ನು ಹೇಗೆ ಎದುರಿಸಬೇಕು ಎಂಬ ಮಾಹಿತಿ ಇದ್ದ ಕಾರಣ ದೇಹಕ್ಕೆ ಹೆಚ್ಚು ಶ್ರಮ ನೀಡದೇ ಬಂಡೆ ಹತ್ತಿಬರಲು ಪ್ರಯತ್ನಿಸಿದೆ ಎಂದರು.
ಸಂಜೆ ವೇಳೆ ಎಷ್ಟೇ ಪ್ರಯತ್ನಿಸಿದರೂ ಮೇಲೆ ಬರಲು ಸಾಧ್ಯವಾಗಲಿಲ್ಲ, ಅದ್ದರಿಂದ ರಾತ್ರಿ ಪೂರ್ತಿ ಅಲ್ಲಿಯೇ ಉಳಿಯಬೇಕಾಯಿತು. ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಂತಹ ಅನುಭವ ಆಗಿದೆ. ಕಲ್ಲು ಬಂಡೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೂ ಈ ರೀತಿ ನಡೆಯುವ ಕುರಿತು ಊಹೆ ಮಾಡಿರಲಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸದರು.
ಇದೇ ವೇಳೆ ನನ್ನ ಯೋಗ ಕ್ಷೇಮದ ಕುರಿತು ಇಷ್ಟು ಪ್ರೀತಿ ತೋರಿದ ಕರ್ನಾಟಕ ಜನತೆಗೆ ಚಿರಋಣಿ ಎಂದ ಅವರು, ಭಾರತಕ್ಕೆ ಒಲಿಂಪಿಕ್ ನಲ್ಲಿ ಪದಕ ತರುವ ತನಕ ನನಗೆ ಏನು ಆಗುವುದಿಲ್ಲ ಎಂದು ಮುಗುಳುನಕ್ಕರು. ಇದನ್ನೂ ಓದಿ: ಜ್ಯೋತಿ ರಾಜ್ ಪತ್ತೆಯಾಗಿದ್ದು ಹೇಗೆ?
https://www.youtube.com/watch?v=wzQj6XUCYj0