ಹಾಸನ: ರಾಜ್ಯದ ಕನ್ನಡಿಗರಿಗೆ ಏನೇ ಆದರೂ, ಧಕ್ಕೆ ತರುವಂತಹ ಸನ್ನಿವೇಶ ಬಂದರೆ ನಾವೆಲ್ಲ ಕನ್ನಡಿಗರು ಹೋರಾಟ ಮಾಡಬೇಕು. ಸರ್ಕಾರ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಳಗಾವಿಯಲ್ಲಿ MES ಪುಂಡಾಟದ ವಿರುದ್ಧ ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಎಂಇಎಸ್, ಶಿವಸೇನೆ ಯಾವುದೇ ಇರಲಿ. ಈ ರಾಜ್ಯದ ಹಿತಕ್ಕೆ ಧಕ್ಕೆಯಾದಾಗ ಎಲ್ಲಾ ಪಕ್ಷಗಳು ಒಂದಾಗಿ ನಮ್ಮ ರಾಜ್ಯದ ನೆಲ ಜಲ ಉಳಿಸಿಕೊಳ್ಳಬೇಕು. ಇದರಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಬೇಕು. ಬೆಳಗಾವಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿಗಳಿಗೆ, ಬೆಳಗಾವಿ ಉಸ್ತುವಾರಿ ಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
ಬೇರೆ ಬೇರೆ ರಾಜ್ಯದಲ್ಲಿರುವ ಕನ್ನಡಿಗರಿಗೆ ಯಾವುದೇ ನೋವಾದಾಗ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಅದನ್ನು ತಡೆಗಟ್ಟುವ ಪ್ರಯತ್ನ ಮಾಡಬೇಕು. ಬೇರೆ ರಾಜ್ಯದಲ್ಲಿರುವ ಕನ್ನಡಿಗರ ರಕ್ಷಣೆಯಾಗಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರು ಇರುತ್ತಾರೆ. ಅಲ್ಲಿ ಹೋಗಿ ಯಾರಾದರೂ ಗಲಾಟೆ ಮಾಡಿದರೆ ಅವರಿಗೆ ರಕ್ಷಣೆ ಕೊಡುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇತುವೆಯಾಗಿ ಕೆಲಸ ಮಾಡಬೇಕು ಎಂದು ರೇವಣ್ಣ ಸಲಹೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ