ರಾಮನಗರ: ಹಣ ನೀಡಿ ಬೇರೆ ಬೇರೆ ಜಿಲ್ಲೆಯಿಂದ ಜನರನ್ನು ಕರೆತಂದು ಅವರಿಗೆ ಕೊರೊನಾ ಅಂಟಿಸಿ ಕಳುಹಿಸುವ ಕೆಲಸವನ್ನು ಡಿಕೆಶಿ ಬ್ರದರ್ಸ್ ಮಾಡುತ್ತಿದ್ದಾರೆ. ಇದರಿಂದಾಗಿ ಶಿವಕುಮಾರ್ ಹಾಗೂ ಅವರ ತಂಡವನ್ನು ಅರೆಸ್ಟ್ ಮಾಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡುತ್ತೇನೆ ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯಂತ ಭ್ರಷ್ಟನನ್ನು, ಲೂಟಿಕೋರನನ್ನು ಒಂದು ವರ್ಷ ಸಿದ್ದರಾಮಯ್ಯ ಕ್ಯಾಬಿನೆಟ್ಗೆ ತಗೆದುಕೊಂಡಿರಲಿಲ್ಲ. ಆದರೆ ಆನಂತರ ಹೈಕಮಾಂಡ್ ಒತ್ತಡಕ್ಕೆ ತಗೆದುಕೊಂಡರು. ಸಿದ್ದರಾಮಯ್ಯ ಈಗ ವೀಕ್ ಆಗಿದ್ದಾರೆ ಎನ್ನಿಸುತ್ತದೆ. ಈ ಪುಂಡರ ಜೊತೆ ಅವರು ನಡೆಯುತ್ತಿದ್ದಾರೆ. ಆಗಾಗ ಬರ್ತಾರೆ ವಾಪಾಸ್ ಹೋಗ್ತಾರೆ ಎಂದು ವ್ಯಂಗ್ಯವಾಡಿದರು.
ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ ಕಳೆದ 4 ದಿನದಿಂದ ಮೇಕೆದಾಟು ಹೆಸರಿನಲ್ಲಿ ಶಿವಕುಮಾರ್ ಹಾಗೂ ಅವರ ಪಟಾಲಂ ದಂಡಯಾತ್ರೆ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಹೈ ಕೋರ್ಟ್ ಸೂಚನೆ ನೀಡಿದೆ. ಆದರೂ ಇದರ ತೀವ್ರ ಉದ್ದೇಶವನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು
ಸರ್ಕಾರ ಕೊರೊನಾ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಇದೇ ಡಿ.ಕೆ.ಶಿವಕುಮಾರ್ ಮತ್ತು ಪಟಾಲಂ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಬಹಳಷ್ಟು ದಾಂಧಲೆಯನ್ನು ಮಾಡಿತ್ತು. ಆದರೂ ಕೊರೊನಾ ಹೆಚ್ಚಳವನ್ನು ಅರ್ಥ ಮಾಡಿಕೊಳ್ಳದೇ ಮೇಕೆದಾಟುವನ್ನು ಮಾಡುತ್ತಿದ್ದಾರೆ ಎಂದ ಅವರು, ಕಾವೇರಿ ನಮ್ಮ ನರನಾಡಿಯಲ್ಲಿದೆ. ನಾವೆಲ್ಲಾ ಅದನ್ನೆ ಕುಡಿದು ಬೆಳೆದೆವು. ಹಳೆ ಮೈಸೂರು ಭಾಗದ ಜೀವನಾಡಿ ಆಗಿದೆ ಎಂದರು. ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಅವರ ಕಾವೇರಿ ನೀರಿನ ಕುರಿತಾಗಿ ಕೋರ್ಟ್ ಆದೇಶ ಬಂದಿತ್ತು. ಆದರೂ ಸಿದ್ದರಾಮಯ್ಯ ಡಿಕೆಶಿ ಅಧಿಕಾರದಲ್ಲಿದ್ದಾಗ ಸುಧೀರ್ಘ ಅಧಿಕಾರದಲ್ಲಿದ್ದಾಗಲೂ ಏನನ್ನು ಮಾತನಾಡಲಿಲ್ಲ. ಡಿಕೆಶಿ ಪ್ರತಿ ಮಾತಿಗೂ ಸಾಕ್ಷಿ ಗುಡ್ಡೆ ಎನ್ನುತ್ತಾರೆ. ಅವರು ಏನು ಸಾಕ್ಷಿಯನ್ನು ಇಟ್ಟಿದ್ದಾರೆ ಎಂದ ಅವರು, ಇದು ಡೋಂಗಿ ಪಾದಯಾತ್ರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಡೊಂಬರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.