-ಆಪರೇಷನ್ ಕಮಲದ ಬಗ್ಗೆ ತನಿಖೆ ನಡೆಯಲಿ
ವಿಜಯಪುರ: ಇಡಿ ಬಂಧನಕ್ಕೊಳಗಾಗಿರುವ ಡಿ.ಕೆ.ಶಿವಕುಮಾರ್ ಈ ಎಲ್ಲ ಕಷ್ಟಗಳಿಂದ ಆದಷ್ಟು ಬೇಗ ಹೊರ ಬರಲಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದ್ದು, ಚಿದಂಬರಂ ಬಳಿಕ ಡಿಕೆ ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಆಪರೇಷನ್ ಕಮಲದಲ್ಲಿ ನೂರಾರು ಕೋಟಿ ರೂ. ಹಣ ಹಾಕಿದ್ದಾರೆ. ಯಾಕೆ ಆಪರೇಷನ್ ಕಮಲದ ಬಗ್ಗೆ ಐಟಿ ಇಲಾಖೆ ತನಿಖೆ ಮಾಡಲ್ಲ. ಐಟಿ, ಇಡಿ ಮತ್ತು ಸಿಬಿಐ ಇಲಾಖೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಬಂಧನದಿಂದ ಅಭಿಮಾನಿಗಳಿಗೆ ಮತ್ತು ಕಾರ್ಯರ್ತರಿಗೆ ನೋವಾಗಿರುತ್ತದೆ. ಹಾಗಾಗಿ ರಸ್ತೆಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಒಟ್ಟಾಗಿ ಹೋರಾಟ ಮಾಡಬೇಕಿದೆ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಬಾರದು ಎಂದು ಎಂ.ಬಿ.ಪಾಟೀಲ್ ಮನವಿ ಮಾಡಿಕೊಂಡರು.