ಬಾಗಲಕೋಟೆ: ಲಿಂಗಾಯತ ಧರ್ಮ ಒಡೆಯಲು ಬಿಡುವುದಿಲ್ಲ ಎಂದು ಹೇಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ವಿರುದ್ಧ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಮಿತ್ ಶಾ ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ಸರಿಯಾಗಿ ಮನವರಿಕೆ ಆಗಿಲ್ಲ ಹಾಗೂ ತಿಳುವಳಿಕೆ ಇಲ್ಲ. ನಮ್ಮಲ್ಲಿಯೇ ಕೆಲವರು ಅಮಿತ್ ಶಾ ಅವರಿಗೆ ತಪ್ಪು ಮಾಹಿತಿ ಕೊಟ್ಟಿದ್ದು, ಇದನ್ನು ಸರಿಪಡಿಸಲು ಪುನಃ ಮನವರಿಕೆ ಮಾಡುತ್ತೇವೆ ಎಂದು ಹೇಳಿದರು.
ದೆಹಲಿಯಲ್ಲಿ ಬೃಹತ್ ಲಿಂಗಾಯತ ಧರ್ಮದ ಸಮಾವೇಶವು ಡಿಸೆಂಬರ್ 10, 11 ಹಾಗೂ 12ರಂದು ನಡೆಯಲಿದೆ. ಈ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇವೆ. ಜೊತೆಗೆ ಲಿಂಗಾಯತ ಧರ್ಮ ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆ ಅವಕಾಶ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೋ ಸಮಯದಲ್ಲಿ ಅನಿಷ್ಟ ಪದ್ಧತಿಗಳು ಜಾರಿಯಾಗಿರುತ್ತವೆ. ಅವುಗಳನ್ನು ಮುಂದುವರಿಸಿಕೊಂಡು ಹೋಗುವುದು ತಪ್ಪು. ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ. ಆದರೆ ಸಂಕುಚಿತ ಮನೋಭಾವ ಹೊಂದಿರುವ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ದೂರಿದರು.
ಎಲ್ಲ ಕ್ಷೇತ್ರದಲ್ಲಿ ಮಹಿಳೆ ಮೇಲೆ ಶೋಷಣೆ ನಡೆಯುತ್ತಿದೆ. ಅದನ್ನು ವಿರೋಧಿಸುವ ಮಹಿಳೆಯರನ್ನು ಬೆಂಬಲಿಸುತ್ತೇವೆ. ಆದರೆ ಈ ವಿಚಾರದಲ್ಲಿ ಕಾನೂನು ದುರುಪಯೋಗಕ್ಕೆ ಅವಕಾಶ ಕೊಡಬಾರದು. ಮಹಿಳೆಯರ ಪ್ರತಿಭೆ, ಸ್ವಾತಂತ್ರ್ಯ ಗುರುತಿಸುವ ಕೆಲಸ ಆಗಬೇಕು ಎಂದ ಅವರು, ಧಾರ್ಮಿಕ ವಿಚಾರದಲ್ಲಿ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದರೆ ಅದೇ ಸಮುದಾಯದವರೇ, ಶೋಷಣೆ ವಿರುದ್ಧ ಹೋರಾಡಬೇಕು. ಒಂದು ವೇಳೆ ಬೇರೆ ಸಮುದಾಯದವರು ಇಂತಹ ಪ್ರಕರಣದಲ್ಲಿ ಭಾಗಿಯಾದರೆ ಅದಕ್ಕೆ ಕೋಮ ಗಲಭೆ ಎನ್ನುವ ಬಣ್ಣ ಹಚ್ಚುತ್ತಾರೆ ಎಂದು ಹೇಳಿದರು.
ವಿವಾಹಿತರ ಅನ್ಯಸಂಬಂಧ ಅಪರಾಧವಲ್ಲ ಎನ್ನುವ ಸುಪ್ರೀಂ ತೀರ್ಪಿನ ಕುರಿತು ಮಾತನಾಡಿದ ಮಹಾದೇವಿ ಅವರು, ಈ ತೀರ್ಪನ್ನು ಮರು ಪರಿಶೀಲನೆ ಮಾಡಬೇಕು. ಸಂಸ್ಕೃತಮಯವಾಗದ ನಮ್ಮ ದೇಶದಲ್ಲಿ ಸಂಬಂಧಗಳಿಗೆ ಪಾವಿತ್ರ ಭಾವನೆ ಇದೆ. ಇದರಿಂದಾಗಿ ಅನೈತಿಕ ಸಂಬಂಧ ಅಪರಾಧವಲ್ಲ ಎಂದಿದ್ದು ಸಮಂಜಸವಲ್ಲ. ಇದು ನಮ್ಮ ಸಂಸ್ಕೃತಿಗೆ ವಿರೋಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv