ಬೆಂಗಳೂರು: ಎದೆ ನೋವು ಅಂತ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ ಮಹಿಳೆಯ ಮೈಮೇಲಿದ್ದ ಮಾಂಗಲ್ಯ ಸರವನ್ನ ಎಗ್ಗರಿಸಲಾಗಿದೆ. ಮಾಂಗಲ್ಯ ಸರ ಕಳ್ಳತನದ ಹಿಂದೆ ಆಸ್ಪತ್ರೆ ಸಿಬ್ಬಂದಿ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಮಹಿಳೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ (Govindrajanagar Police Station) ದೂರು ನೀಡಿದ್ದಾರೆ.
ರಾಧಾ ಎಂಬವರು ಫೆಬ್ರವರಿ 8 ರಂದು ಮೂಡಲ್ ಪಾಳ್ಯದಲ್ಲಿರೋ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾರೆ. ಎದೆನೋವು ಅಂತ ಹೋಗಿದ್ದಾರೆ. ಎದೆ ನೋವು ಇದ್ದ ಕಾರಣ ಇಸಿಜಿ ಮಾಡಬೇಕು ಚಿನ್ನದ ಸರ ತಗೆದು ಇಡುವಂತೆ ನರ್ಸ್ ಅಕ್ಷತಾ ಸೂಚಿಸುತ್ತಾರೆ. ಮಾಂಗಲ್ಯ ಸರ ತೆಗೆದ ಬಳಿಕ ಪತಿಗೆ ಕೊಡಲು ಮಹಿಳೆ ಸೂಚಿಸಿದ್ದಾರೆ.
ನರ್ಸ್ ದಿಂಬಿನ ಕೆಳಗಡೆ ಇಡುವಂತೆ ಸೂಚಿಸಿದ್ದಾರೆ. ಅದರಂತೆ ಮಹಿಳೆ ಕೆಳಗಡೆ ಸರ ಇಟ್ಟು ECG ಮಾಡಿಸಿಕೊಂಡು ಗಾಬರಿಯಲ್ಲಿ ಸರ ಮರೆತು ಹೋಗಿರುತ್ತಾರೆ. ರಾಧಾ ಅವರಿಗೆ ಮಾತ್ರೆ ಇಂಜೆಕ್ಷನ್ ಕೊಟ್ಟಿದ್ದ ಕಾರಣ ಮಾಂಗಲ್ಯ ಸರ ಆಸ್ಪತ್ರೆಯಲ್ಲಿ ಬಿಟ್ಟಿರೋದನ್ನ ಮರೆತು ನಿದ್ದೆ ಮಾಡಿಬಿಟ್ಟಿದ್ದಾರೆ. ಮಾರನೇ ದಿನ ಸ್ನಾನಕ್ಕೆ ಹೋದಾಗ ಮಹಿಳೆಗೆ ಸರದ ಬಗ್ಗೆ ಅರಿವಾಗಿದೆ. ಕೂಡಲೇ ನೆನಪಿಸಿಕೊಂಡು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ. ಇದನ್ನೂ ಓದಿ: ಚಿನ್ನದ ಅಂಗಡಿಗೆ ಕನ್ನ – 250 ಗ್ರಾಂ ಚಿನ್ನ, 1.8 ಲಕ್ಷ ರೂ. ಹಣದೊಂದಿಗೆ ಪರಾರಿ
ಸಿಸಿಟಿವಿ ಪರಿಶೀಲನೆ ಮಾಡಿ ನೋಡಿದಾಗ ನರ್ಸ್ ಒಬ್ಬರು ಕೈಯಲ್ಲಿ ಸರ ಗೊತ್ತಾಗದಂತೆ ಹಿಡಿದುಕೊಂಡು ಬರುತ್ತಿರೋದು ಅನುಮಾನ ಹುಟ್ಟಿಸಿದೆ. ಹಾಗಾಗಿ ಸಿಸಿಟಿವಿ ದೃಶ್ಯಗಳೊಂದಿಗೆ ದೂರು ಕೊಟ್ಟಿದ್ದು, ಗೋವಿಂದರಾಜ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.