ಮಂಡ್ಯ: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲಿನಲ್ಲಿರುವ ಕೆ.ಆರ್.ಪೇಟೆ ಕ್ಷೇತ್ರದ ಅತೃಪ್ತ ಶಾಸಕ ಡಾ.ನಾರಾಯಣಗೌಡರ ವಿರುದ್ಧ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ಇಂದು ಅವರ ಅನುಪಸ್ಥಿತಿಯಲ್ಲಿ ಅವರ 57ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.
ಕೆ.ಆರ್.ಪೇಟೆಯ ಬಸವೇಶ್ವರ ನಗರದಲ್ಲಿರುವ ಶಾಸಕ ನಾರಾಯಣಗೌಡ ನಿವಾಸದಲ್ಲಿ ಕೇಕ್ ಕತ್ತರಿಸಿ ಬಳಿಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು. ವಿರೋಧಿಗಳು ಕ್ಷೇತ್ರದಲ್ಲಿ ನಾರಾಯಣಗೌಡ ನಡೆಗೆ ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ನಾರಾಯಣ ಗೌಡ ಅಭಿಮಾನಿಗಳು ಶಾಸಕರಿಗೆ ಜೈಕಾರ ಹಾಕಿದರು.
ನಾರಾಯಣಗೌಡ ನಡೆಗೆ ಸಂತಸ ವ್ಯಕ್ತಪಡಿಸಿದ ಅಭಿಮಾನಿಗಳು, ನಾರಾಯಣಗೌಡ ತೆಗೆದುಕೊಂಡಿರೋ ತೀರ್ಮಾನಕ್ಕೆ ಇಡೀ ಕ್ಷೇತ್ರದ ಜನರ ಬೆಂಬಲವಿದೆ. ಶಾಸಕ ನಾರಾಯಣಗೌಡ ಹಣಕೋಸ್ಕರ ರಾಜೀನಾಮೆ ನೀಡಿಲ್ಲ. ಇಡೀ ಕ್ಷೇತ್ರದ ಅಭಿವೃದ್ಧಿಗೋಸ್ಕರ ನೀಡಿದ್ದಾರೆ. ಅವರು ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿಲ್ಲ ಎಂದು ಹೇಳಿದರು.
ಅವರಿಗೇನು ಇಲ್ಲಿ ದುಡ್ಡು ಮಾಡಿ ಅವರ ಮಕ್ಕಳನ್ನು ಸಾಕುವ ಅವಶ್ಯಕತೆ ಇಲ್ಲ. ಕ್ಷೇತ್ರಕ್ಕೆ ಬಂದು ನಾರಾಯಣಗೌಡರೇ ಸುದ್ದಿಗೋಷ್ಠಿ ಮಾಡುತ್ತಾರೆ. ಆ ಮೂಲಕ ನಾರಾಯಣಗೌಡ ವಿರೋಧಿಗಳಿಗೆ ಉತ್ತರ ಕೊಡುವ ಆಶಾಭಾವನೆ ವ್ಯಕ್ತಪಡಿಸಿದರು.