ಭೋಪಾಲ್: ವ್ಯಕ್ತಿಯೊಬ್ಬ ಚಿಕಿತ್ಸೆಗೆ ಕರೆತಂದ ತನ್ನ ಪುಟ್ಟ ಕಂದಮ್ಮನನ್ನು ವೇದಿಕೆಯಲ್ಲಿ ಕುಳಿತಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮುಂದೆ ಎಸೆದ ಹೀನಾಯ ಪ್ರಸಂಗವೊಂದು ನಡೆದಿದೆ.
ಈ ಘಟನೆ ಮಧ್ಯಪ್ರದೇಶ (Madhyapradesh) ದ ಸಾಗರ್ ಎಂಬಲ್ಲಿ ನಡೆದಿದೆ. ವ್ಯಕ್ತಿಯನ್ನು ಮುಕೇಶ್ ಪಟೇಲ್ ಎಂದು ಗುರುತಿಸಲಾಗಿದೆ. ವ್ಯಕ್ತಿಯು ತನ್ನ 1 ವರ್ಷದ ಮಗುವನ್ನು ವೇದಿಕೆಗೆ ಎಸೆಯುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು. ಕೂಡಲೇ ಮಗುವನ್ನು ತೆಗೆದುಕೊಂಡು ಅದರ ತಾಯಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದಾಗಿ ಕಾರ್ಯಕ್ರಮದಲ್ಲಿ ನೆರೆದಿದ್ದವರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ನಡೆದಿದ್ದೇನು..?: ಮಧ್ಯಪ್ರದೇಶದ ಮುಖ್ಯಮಂತ್ರಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸಾಗರದ ಕೆಸ್ಲಿ ತಹಸಿಲ್ನ ಸಹಜ್ಪುರ ಗ್ರಾಮದ ನಿವಾಸಿಯಾಗಿರುವ ಮುಖೇಶ್ ಪಟೇಲ್ (Mukesh Patel) ಹಾಗೂ ನೇಹಾ ದಂಪತಿಯ ಮಗುವಿನ ಹೃದಯದಲ್ಲಿ ರಂಧ್ರವಿದೆ. ದಂಪತಿ ಈವರೆಗೆ ಮಗುವಿನ ಚಿಕಿತ್ಸೆಗಾಗಿ 4 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಆದರೆ ಮಗುವಿನ ಶಸ್ತ್ರಚಿಕಿತ್ಸೆಗೆ ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಇದನ್ನೂ ಓದಿ: ನನ್ನ ಬೆನ್ನಿಗೆ ಚೂರಿ ಹಾಕ್ತೀರಿ, ಎಷ್ಟು ಕಿರುಕುಳ ಕೊಡ್ತೀರಿ: ಖೂಬಾ ವಿರುದ್ಧ ಪ್ರಭು ಚವ್ಹಾಣ್ ಕೆಂಡಾಮಂಡಲ
ಅಂತೆಯೇ ಇತ್ತೀಚೆಗೆ ಸಾರ್ವಜನಿಕ ಸಮಾವೇಶವೊಂದರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಿದ್ದರು. ಇದು ಮುಕೇಶ್ ಗಮನಕ್ಕೆ ಬಂದಿದ್ದು, ಕಾರ್ಯಕ್ರಮದಂದು ತನ್ನ ಮಗುವಿನೊಂದಿಗೆ ಮುಕೇಶ್ ಪಟೇಲ್ ದಂಪತಿ ತೆರಳಿದ್ದರು. ಮೊದಲು ಪೊಲೀಸರ ಬಳಿ ಹೋಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ. ಆದರೆ ಪೊಲೀಸರು ಇದಕ್ಕೆ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮುಖ್ಯಮಂತ್ರಿಯ ಗಮನಕ್ಕೆ ತರುವ ಸಲುವಾಗಿ ಮುಕೇಶ್ ತನ್ನ ಮಗುವನ್ನು ವೇದಿಕೆಯ ಬಳಿ ಎಸೆದಿದ್ದಾರೆ. ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮಗುವನ್ನು ಮೇಲೆತ್ತಿ ತಾಯಿಗೆ ನೀಡಿದ್ದಾರೆ. ಬಳಿಕ ಅಧಿಕಾರಿಗಳು ಈ ವಿಚಾರವನ್ನು ಮುಖ್ಯಮಂತ್ರಿಗೆ ಹೇಳಿದ್ದಾರೆ. ಆತನ ಮಗುವಿನ ಹೃದಯದಲ್ಲಿ ರಂಧ್ರವಿದೆ. ಸಹಾಯಕ್ಕಾಗಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಎಲ್ಲಾ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ನನ್ನ ಮಗು 3 ತಿಂಗಳು ಇರುವಾಗ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿತ್ತು. ಇದಕ್ಕಾಗಿ 4 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದೇನೆ. ವೈದ್ಯರು ಆಪರೇಷನ್ ಮಾಡಬೇಕೆಂದು ಹೇಳಿದ್ದು, ಅದಕ್ಕೆ 3.50 ಲಕ್ಷ ವೆಚ್ಚವಾಗಲಿದೆ ಎಂದಿದ್ದಾರೆ. ಆದರೆ ಅಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವುದು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಬಂದೆವು. ಆದರೆ ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ವೇದಿಕೆಯತ್ತ ಮಗುವನ್ನು ಎಸೆದಿದ್ದಾಗಿ ಮುಕೇಶ್ ಪಟೇಲ್ ಹೇಳಿದ್ದಾರೆ.