ವಿಜಯಪುರ: ಈ ಮೊದಲು ಜಿಲ್ಲೆಯ ಭೀಮಾತೀರದ ಪರಿಸರದಲ್ಲಿ ಕಂಟ್ರಿ ಬಂದೂಕುಗಳು ಪತ್ತೆ ಆಗುತ್ತಿದ್ದವು. ಇದೀಗ ಇಂಡಿ ಪಟ್ಟಣದ ಕೆ.ಇ.ಬಿ. ಕಾಲೋನಿಯಲ್ಲಿ ನಕಲಿ ನೋಟ್ ಮುದ್ರಿಸುತ್ತಿದ್ದ ಮಶಿನ್ ಪತ್ತೆಯಾಗಿದ್ದು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಲಪ್ಪ ಹರಿಜನ್ ಬಂಧಿತ ಆರೋಪಿ. ಕೆ.ಇ.ಬಿ. ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಲ್ಲಪ್ಪ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದನು. ಕಲ್ಲಪ್ಪ ತನ್ನ ಮನೆಯಲ್ಲಿ ಕಲರ್ ಪ್ರಿಂಟರ್ ಮತ್ತು ಸ್ಕ್ಯಾನರ್ ಇಟ್ಟುಕೊಂಡಿದ್ದನು. ಅಸಲಿ ನೋಟ್ ಗಳನ್ನು ಸ್ಕ್ಯಾನ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳುತ್ತಿದ್ದನು. ಮಾರುಕಟ್ಟೆಯಲ್ಲಿ ಅಸಲಿ ನೋಟ್ ಗಳ ಮಧ್ಯೆ ನಕಲಿ ಇರಿಸಿ ಚಲಾಯಿಸುತ್ತಿದ್ದನು. ನಕಲಿ ನೋಟ್ ಗಳನ್ನು ಪರ್ಸೆಂಟೆಜ್ ಲೆಕ್ಕದಲ್ಲಿ ಹಲವರೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದನು ಎಂಬ ಮಾಹಿತಿ ಲಭಿಸಿದೆ.
ಖಚಿತ ಮಾಹಿತಿ ಪಡೆದ ಇಂಡಿ ನಗರ ಪಿಎಸ್ಐ ರವಿ ಯಡವನ್ನವರ್ ಮತ್ತು ಇಂಡಿ ಗ್ರಾಮೀಣ ಪಿಎಸ್ಐ ಸಿಂಧೂರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿ ಪಟ್ಟಣದ ಅಲ್ಲಾಭಕ್ಷ ನಾಗೂರು ಎಂಬವರ ಮನೆಯನ್ನು ಆರೋಪಿ ಬಾಡಿಗೆ ಪಡೆದುಕೊಂಡಿದ್ದನು. ಮನೆಯಲ್ಲಿ ನಕಲಿ ನೋಟ್ ಪ್ರಿಂಟ್ ಮಾಡುವ ಮೂಲಕ ದೇಶದ್ರೋಹ ಕೆಲಸದಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv