ಹುಬ್ಬಳ್ಳಿ: ಕರ್ತವ್ಯ ನಿರತ ಆರ್ ಪಿಎಫ್ ಪೊಲೀಸ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿದ ಯುವಕನನ್ನು ಬಂಧಿಸಿರುವ ಘಟನೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ವೇಳೆ ನಿಲ್ದಾಣದ ವಿಐಪಿ ಲಾಂಜ್ ಬಳಿ ವ್ಯಕ್ತಿಯೊಬ್ಬ ಮೊಬೈಲ್ ಹಿಡಿದು ಫೋಟೋ ತೆಗೆದಿದ್ದಾರೆ. ಇದನ್ನು ಗಮನಿಸಿದ ಆರ್ ಪಿಎಫ್ ಪೊಲೀಸ್ ಪೇದೆ ಭದ್ರತೆಯ ದೃಷ್ಟಿಯಿಂದ ಫೋಟೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಯುವಕ ಹಾಗೂ ಆತನ ಜೊತೆಗಿದ್ದ ಸ್ನೇಹಿತರು ಫೋಟೋ ಡಿಲೀಟ್ ಮಾಡಲು ನಿರಾಕರಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದೆ. ಈ ಹಂತದಲ್ಲಿ ಅವರನ್ನು ಬೆದರಿಸಲು ಪೊಲೀಸ್ ಬಂದೂಕು ತೋರಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಯುವಕ ತನ್ನ ಬಳಿಯೂ ಪಿಸ್ತೂಲ್ ಇದೆ ಎಂದು ತೋರಿಸಿ ಅವಾಜ್ ಹಾಕಿದ್ದಾನೆ. ಪರಿಣಾಮ ಯುವಕನ್ನ ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯ ಅನ್ವಯ ಬಂಧಿತ ಯುವಕ ಮಂಟೂರು ರಸ್ತೆಯ ಬ್ಯಾಳಿ ಓಣಿ ನಿವಾಸಿ ಶರೀಫ ಆದೋನಿ ಎನ್ನಲಾಗಿದ್ದು, ಆತನೊಂದಿಗೆ ಇದ್ದ ಯುವಕರನ್ನು ವಶಕ್ಕೆ ಪಡೆದು ಗದಗ ರಸ್ತೆಯ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಆ ಬಳಿಕ ಅವರನ್ನು ಶಹರ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಘಟನೆಯಿಂದ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.