ಯಾದಗಿರಿ: ತಮ್ಮ 40 ವರ್ಷದ ರಾಜಕೀಯ ವೈಷಮ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಇಂದು ತಡರಾತ್ರಿ ತಿಲಾಂಜಲಿ ಬಿಟ್ಟಿದ್ದಾರೆ. ಉಮೇಶ್ ಜಾದವ್ ಸೋಲಿಸುವ ಜಿದ್ದಿಗಾಗಿ, ತಮ್ಮ ರಾಜಕೀಯ ವೈರಿ ಶಾಸಕ ನಾಗನಗೌಡ ಕಂದಕೂರ ಮನೆ ಬಾಗಿಲನ್ನು ತಟ್ಟಿದ್ದಾರೆ.
ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಮೈತ್ರಿ ಧರ್ಮಪಾಲಿಸುವಂತೆ, ಕಾಂಗ್ರೆಸ್ ಜೆಡಿಎಸ್ ನಾಯಕರು ಹೇಳಿದ್ದಾರೆ. ಆದರೆ ತಮ್ಮ ನಾಯಕರ ಮಾತಿಗೆ ಸೊಪ್ಪು ಹಾಕದ, ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಇದುವರೆಗೂ ಖರ್ಗೆ ಪರ ಪ್ರಚಾರಕ್ಕೆ ಬಂದಿರಲಿಲ್ಲ.
ಖರ್ಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಪಡೆಯಬೇಕಾದರೆ ನಾಗನಗೌಡ ಕಂದಕೂರು ಸಹಕಾರ ಅಗತ್ಯವಾಗಿದೆ. ಹೀಗಾಗಿ ತಮ್ಮ ರಾಜಕೀಯ ವೈಷಮ್ಯಕ್ಕೆ ಮುಕ್ತಿ ನೀಡಿದ ಮಲ್ಲಿಕಾರ್ಜುನ ಖರ್ಗೆ, ಶಹಪುರದ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ, ಕೆ.ಬಿ ಶಾಣಪ್ಪ, ಕೆಸಿ ಕೊಂಡಯ್ಯ ಜೊತೆ ಶಾಸಕ ನಾಗನಗೌಡ ಕಂದಕೂರ ಅವರನ್ನು ಭೇಟಿ ಮಾಡಿ ಅವರು ಸಹಕಾರ ಕೇಳಿದರು.
ಭೇಟಿ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಸದ್ಯ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಹೀಗಾಗಿ ನಾಗನಗೌಡರನ್ನು ಭೇಟಿ ಮಾಡಿ ಮೈತ್ರಿ ಧರ್ಮ ಪಾಲಿಸುವಂತೆ ಕೇಳಿಕೊಂಡಿದ್ದೇನೆ. ನಾಳೆಯಿಂದ ಕ್ಷೇತ್ರದಲ್ಲಿ ಅವರು ಪ್ರಚಾರ ಮಾಡಲಿದ್ದಾರೆ ಎಂದರು. ನಂತರ ಶಾಸಕ ನಾಗನಗೌಡ ಮಾತನಾಡಿ ನಮ್ಮ ನಾಯಕರು ಕಾಂಗ್ರೆಸ್ ಗೆ ಮೈತ್ರಿ ಧರ್ಮ ಪಾಲಿಸುತ್ತೆವೆಂದು ಮಾತು ನೀಡಿದ್ದಾರೆ. ಹೀಗಾಗಿ ನಾನು ನಾಳೆಯಿಂದ ಕ್ಷೇತ್ರದಲ್ಲಿ ಖರ್ಗೆ ಪರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ತಮ್ಮ ಆಡಳಿತ ಅವಧಿಯಲ್ಲಿ ಶಾಸಕ ನಾಗನಗೌಡ ಕಂದಕೂರು ಮೇಲೆ ಹಲವಾರು ದೂರುಗಳನ್ನು ದಾಖಲಿಸಿದ್ದರು ಎಂಬ ಆರೋಪ ಸಹ ಇದೆ. ಇದರಿಂದ ಖರ್ಗೆ ಮತ್ತು ನಾಗನಗೌಡರ ಮಧ್ಯೆ ಶತ್ರುತ್ವ ಬೆಳೆದಿತ್ತು. ಈ ಕಾರಣದಿಂದ ನಾಗನಗೌಡ ಖರ್ಗೆ ಪರ ಪ್ರಚಾರಕ್ಕೆ ಬರುವುದಿಲ್ಲ ಎಂಬ ಸುದ್ದಿ ಜಿಲ್ಲೆಯಲ್ಲಿ ಎದ್ದಿತ್ತು. ಸದ್ಯ ನಾಗನಗೌಡ ಕಂದಕೂರು ಶಾಸಕರಾಗಿ ಗೆದ್ದಿರುವ ಗುರುಮಠಕಲ್ ವಿಧಾನಸಭಾ ಕ್ಷೇತ್ರ, ಕಲಬುರಗಿ ಲೋಕಸಭಾ ವ್ಯಾಪ್ತಿಗೆ ಬರುತ್ತದೆ.