– ಬಿಎಸ್ವೈ ಮಾತು ತಪ್ಪಲ್ಲ
ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸಂಪುಟ ಕಿತ್ತಾಟ ಜೋರಾಗಿ ನಡೀತಿದೆ. ಸಚಿವ ಸಂಪುಟದ ಆಕಾಂಕ್ಷಿ ಆಗಿರೋ ಶಾಸಕ ಮಹೇಶ್ ಕುಮಟಳ್ಳಿ ಯಡಿಯೂರಪ್ಪ ನನ್ನನ್ನು ಮಂತ್ರಿ ಮಾಡಿಯೇ ಮಾಡ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಬೆಂಕಿಯ ಚಕ್ರವ್ಯೂಹದಲ್ಲಿ ಬಂದವನು ನಾನು. ಹೀಗಾಗಿ ಯಡಿಯೂರಪ್ಪ ಅನ್ಯಾಯ ಮಾಡಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, ಅಥಣಿಯಲ್ಲಿ ನನಗೆ ಮಂತ್ರಿ ಕೊಟ್ಟರೆ 3 ಜನರಿಗೆ ಕೊಟ್ಟ ಹಾಗೇ ಆಗುತ್ತೆ. ಲಿಂಗಾಯತ ಕೋಟಾಗೆ ಜಾಸ್ತಿ ಆಗುತ್ತೆ ಅನ್ನೋದಕ್ಕೆ ಕೊಡಲ್ಲ ಅಂತಿದ್ದಾರೆ. ಆದರೆ ಈ ಕಾರಣಕ್ಕೆ ಮಂತ್ರಿ ಸ್ಥಾನ ತಪ್ಪಿದ್ರೆ ನನಗೆ ಅನ್ಯಾಯ ಮಾಡಿದಂತೆ ಅಂತ ಅಸಮಾಧಾನ ಹೊರ ಹಾಕಿದ್ರು.
ಲಕ್ಷ್ಮಣ ಸವದಿಯವರು ಮೂಲ ಬಿಜೆಪಿಯವರಾಗಿದ್ದಾರೆ. ಪಕ್ಷ ಸಂಘಟನೆಗೆ ಅವರಿಗೆ ಸ್ಥಾನ ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆಗಲು ರಮೇಶ್ ಜಾರಕಿಹೊಳಿ ಮೊದಲ ಸ್ಥಾನದಲ್ಲಿ ಇದ್ದರೆ, ನಾನು ಎರಡನೇ ಸ್ಥಾನದಲ್ಲಿ ಇದ್ದೆ. ನಾವು ಯಾವ ಕೋಟಾದಲ್ಲೂ ಅವತ್ತು ಬಂದಿರಲಿಲ್ಲ. ರಾಜಕೀಯ ವಿದ್ಯಮಾನಗಳಿಂದ, ರಾಜಕೀಯ ಸನ್ನಿವೇಶದಲ್ಲಿ ಬಂದಿದ್ದೇವೆ. ಸವದಿ ಕೊಟ್ಟಿದ್ದು ಸರಿ ಇದೆ. ಆದರೆ ಸರ್ಕಾರ ಬರಲು 17 ಜನ ನಾವು ಕಾರಣ. ಇದನ್ನ ಅರಿತು ಮಂತ್ರಿ ಸ್ಥಾನ ಕೊಡಬೇಕು ಅಂತ ತಿಳಿಸಿದರು. ಇದನ್ನೂ ಓದಿ: ನಾನು ತ್ಯಾಗ ಮಾಡ್ತೀನಿ, ಸೋತ ವಿಶ್ವನಾಥ್ಗೆ ಮಂತ್ರಿ ಸ್ಥಾನ ಕೊಡಿ: ಕುಮಟಳ್ಳಿ
ರಮೇಶ್ ಜಾರಕಿಹೊಳಿ ಜೊತೆ ಮಾತಾಡಿದ್ದೇವೆ. ನಮ್ಮ ವಿಚಾರ ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಸಣ್ಣ ವಿಚಾರಕ್ಕೆ ನಮ್ಮನ್ನ ಕೈ ಬಿಟ್ಟರೆ ಅನ್ಯಾಯ, ನೋವು ಆಗುತ್ತೆ. ಸಿಎಂ ಜನರ ಮುಂದೆ ಮಂತ್ರಿ ಮಾಡ್ತೀನಿ ಅಂತ ಹೇಳಿದ್ರು. ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ. ಪ್ರಾಣ ಬೇಕಾದರೂ ಬಿಡುತ್ತಾರೆ. ಆದರೆ ಅವರು ಕೊಟ್ಟ ಮಾತು ತಪ್ಪಲ್ಲ. ಒಂದು ವೇಳೆ ಯಡಿಯೂರಪ್ಪ ಮಾತು ತಪ್ಪಿದ್ರೆ ಅವರಿಗೆ ಅದು ಕಪ್ಪು ಚುಕ್ಕೆ ಆದಂತೆ ಆಗುತ್ತೆ. ಯಡಿಯೂರಪ್ಪ ವಚನ ಭ್ರಷ್ಟ ಪಟ್ಟ ಕಟ್ಟಿಕೊಳ್ಳಲ್ಲ ಅನ್ನೋ ನಂಬಿಕೆ ಇದೆ ಅಂತ ತಿಳಿಸಿದರು.
ರಮೇಶ್ ಜಾರಕಿಹೊಳಿ ಕೂಡ ನಮಗೆ ಮಂತ್ರಿ ಸ್ಥಾನ ಕೊಡದೇ ಹೋದ್ರೆ ಅನ್ಯಾಯ ಆಗುತ್ತೆ ಅಂತ ಹೇಳಿದ್ದಾರೆ. ಬಿಜೆಪಿಗೆ ನಮ್ಮ ಮಾತಿಂದ ಮುಜುಗರ ಆಗಬಾರದು ಅಂತ ನಾವು ಏನೂ ಮಾತಾಡುತ್ತಿಲ್ಲ. ನಮಗೂ ನೋವಿದೆ. ಬಿಜೆಪಿ ಅವರು ನಮ್ಮ ಜಾಗದಲ್ಲಿ ನಿಂತು ನಿರ್ಧಾರ ಮಾಡಲಿ. ನಮ್ಮನ್ನ ಕೈ ಬಿಟ್ಟರೆ ಜನರಿಗೆ, ರಾಜಕೀಯವಾಗಿ ಬೇರೆ ಸಂದೇಶ ಹೋಗುತ್ತೆ. ಮುಂದೆ ಪಕ್ಷಕ್ಕೆ ಬರೋರಿಗೆ ಇದರಿಂದ ಭಯ ಆಗಬಾರದು. ನಾವು ತ್ಯಾಗ ಮಾಡಿ ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡು ಬಂದಿದ್ದೇವೆ. ಹೀಗಿದ್ದರೂ ಮಂತ್ರಿ ಸ್ಥಾನ ಕೊಡದೇ ಹೋದ್ರೆ ಅನ್ಯಾಯ ಆಗುತ್ತೆ ಅಂತ ಅಸಮಾಧಾನ ಹೊರ ಹಾಕಿದ್ರು. ಅಲ್ಲದೆ ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ನಾನು ಮಂತ್ರಿ ಆಗೇ ಆಗ್ತೀನಿ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಚಿವ ಸ್ಥಾನ ಸಿಗದಕ್ಕೆ ಕಣ್ಣೀರಿಟ್ಟ ಶಾಸಕ ಮಹೇಶ್ ಕುಮಟಳ್ಳಿ!