ಧಾರವಾಡ: ಮಹದಾಯಿ ಹೋರಾಟಗಾರ ಹಾಗೂ ರೈತ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರಿಗೆ ಅನಾಮಧೇಯ ವ್ಯಕ್ತಿಯೋರ್ವ ಫೋನ್ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ.
ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಸೊಬರದಮಠ ಅವರು ನರಗುಂದದಲ್ಲಿ ಕಳೆದ ಐದು ವರ್ಷಗಳಿಂದ ಮಹದಾಯಿ ಹೋರಾಟ ಮಾಡುತ್ತಿದ್ದಾರೆ. ಆದರೆ ಶುಕ್ರವಾರ ರಾತ್ರಿ ವ್ಯಕ್ತಿಯೋರ್ವ ಅವರಿಗೆ ಮೊಬೈಲ್ ಕರೆ ಮಾಡಿ 8 ದಿನದೊಳಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಸಂಬಂಧ ಪ್ರತಿಕಾ ಪ್ರಕಟನೆ ನೀಡಿರುವ ವೀರೇಶ ಸೊಬರದಮಠ, ಫೋನ್ ಮಾಡಿದ ವ್ಯಕ್ತಿಯನ್ನು ನೀನು ಯಾರು ಪ್ರಶ್ನಿಸಿದೆ. ಆದರೆ ಅವನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಫೋನ್ ಕಟ್ ಮಾಡಿದ ಎಂದು ತಿಳಿಸಿದ್ದಾರೆ.
ಈ ಕುರಿತು ವೀರೇಶ ಸೊಬರದಮಠ ಅವರು ನವಲಗುಂದ ಠಾಣೆಗೆ ದೂರು ನೀಡಿದ್ದಾರೆ. ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ನಂಬರ್ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.