ತುಮಕೂರು: ಬಿಜೆಪಿಯಲ್ಲಿ ಖಾತೆ ಕ್ಯಾತೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸಚಿವ ಮಾಧುಸ್ವಾಮಿ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆ ದೊರೆತಿಲ್ಲ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅಸಮಾಧಾನ ಹೊರಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧುಸ್ವಾಮಿ ಅವರ ಸಾಮರ್ಥ್ಯಕ್ಕೆ ಲೋಕೋಪಯೋಗಿ, ಇಂಧನ ಖಾತೆ ಕೊಡಬೇಕಿತ್ತು. ಆದರೆ ಕಾನೂನು ಮತ್ತು ಸಣ್ಣ ನೀರಾವರಿ ಖಾತೆ ಮಾತ್ರ ಕೊಟ್ಟಿರೋದು ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಉಂಟು ಮಾಡಿದೆ ಎಂದು ಹೇಳಿದರು.
ಖಾತೆ ಕುರಿತು ಮಾಧುಸ್ವಾಮಿಯವರಿಗೂ ಅಸಮಾಧಾನ ಇದೆ. ಆದರೆ ಅವರು ಎಲ್ಲೂ ಹೇಳಿಕೊಳ್ಳುತ್ತಿಲ್ಲ. ನಾವು ಅವರ ಅಭಿಮಾನಿಯಾಗಿ ವರಿಷ್ಠರ ಬಳಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ತಮ್ಮ ಬಿಜೆಪಿ ಸರ್ಕಾರ ಇನ್ನೂ ನಾಲ್ಕು ವರ್ಷ ಮೂರು ತಿಂಗಳು ಅಧಿಕಾರದಲ್ಲಿ ಇರಲಿದೆ. ಯಾಕೆಂದರೆ ಒಂದು ದೇಶ ಒಂದು ಚುನಾವಣೆ ಜಾರಿಯಾಗುವುದರಿಂದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಹೆಚ್ಚಿಗೆ ಅಧಿಕಾರ ನಡೆಸಲು ಅವಕಾಶ ದೊರಕಲಿದೆ ಎಂದು ಮಸಾಲೆ ಜಯರಾಮ್ ವಿಶ್ವಾಸ ವ್ಯಕ್ತಪಡಿಸಿದರು.