ತುಮಕೂರು: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಪಕ್ಷಕ್ಕೆ ವಿದಾಯ ಹೇಳಿದ್ದು, ಬಿಜೆಪಿ ಸೇರಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಇತ್ತೀಚಿನ ನಡವಳಿಕೆಯಿಂದ ಬೇಸತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೆ. ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದೆ. ಕಳೆದ 5 ವರ್ಷಗಳಿಂದ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷನಾಗಿ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸಿದ್ದೇನೆ. ಎಲ್ಲಾ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಹಿಂದುಳಿದ ವರ್ಗಗಳಲ್ಲಿ ಬರುವ 197 ಜಾತಿಗಳ ಪ್ರಮುಖರು ಹಾಗೂ ಸಮುದಾಯಗಳನ್ನು ಗುರುತಿಸಿ ಸಂಘಟನೆ ಮಾಡಿದ್ದೇನೆ. ಆ ಮೂಲಕ ಪಕ್ಷವನ್ನು ಬಲಪಡಿಸುವ ನಿಟ್ಟಿಲ್ಲಿ ಕೆಲಸ ಮಾಡಿದೆ ಎಂದರು. ಇದನ್ನೂ ಓದಿ: ಪಾದಪೂಜೆ ಪಾಲಿಟಿಕ್ಸ್- ಅತ್ತ ಬಿಜೆಪಿ ಶಾಸಕ, ಇತ್ತ ಕೈ ಮುಖಂಡನಿಂದ ಪೌರಕಾರ್ಮಿಕರಿಗೆ ಪಾದಪೂಜೆ
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಿಲುವು ಹಿಂದುತ್ವದ ವಿರೋಧಿಯಾಗಿದ್ದು, ಯಾವುದೇ ಹಿಂದೂ ಸಂಘಟನೆಗಳನ್ನು ಮೂಲೆ ಗುಂಪು ಮಾಡುವಲ್ಲಿ ತೆಗೆದುಕೊಂಡ ನಿರ್ಣಯವನ್ನು ವಿರೋಧಿಸಿದ್ದೆ. ಹಿಂದೆ ನಾನು ಸಂಘ ಪರಿವಾರದ ಮೂಲಕ ಬಂದಿದ್ದು, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷನಾಗಿ ಅನೇಕ ಹಿಂದೂ ಸಂಘನೆಗಳೊಂದಿಗೆ ಕೆಲಸ ಮಾಡಿರುವೆ ಎಂದು ತಿಳಿಸಿದರು.
ಕಾಂಗ್ರೆಸ್ನ ನಾಯಕರ ಜೊತೆ ಈ ಬಗ್ಗೆ ಚರ್ಚಿಸಿದಾಗ ಆರ್ಎಸ್ಎಸ್ ಮೂಲದ ವ್ಯಕ್ತಿಗಳು ಪಕ್ಷದಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಹೊರಬಂದ ನಂತರ ನನ್ನ ರಾಜಕೀಯ ಭವಿಷ್ಯ ಮತ್ತು ಮುಂದಿನ ದಾರಿಗಳ ಬಗ್ಗೆ ಚಿಂತಿಸಿದೆ ಎಂದು ಸ್ಪಷ್ಟಪಡಿಸಿದರು.
ತುರುವೇಕೆರೆ ವಿಧಾಸಭಾ ಕ್ಷೇತ್ರದಿಂದ ನನ್ನನ್ನು ಹಿಂದೆ ಆಯ್ಕೆ ಮಾಡಿ ಕಳುಹಿಸಿದ ಅಭಿಮಾನಿಗಳ ಜೊತೆಗೆ ಚರ್ಚಿಸಿದೆ. ಕಳೆದ 20 ವರ್ಷಗಳಿಂದ ನೇಕಾರ ಸಮಾಜದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ರಾಜ್ಯದ ಎಲ್ಲಾ ನೇಕಾರ ಬಂಧುಗಳು, ಹಿಂದುಳಿದ ವರ್ಗಗಳ ಎಲ್ಲ ಪ್ರಮುಖರು ಹಾಗೂ ಹಿಂದುಳಿದ ನಾಯಕರ ಜತೆ ಚರ್ಚಿಸಿದೆ. ಅವರು ನನಗೆ ಸ್ಪಷ್ಟ ಸಲಹೆ ಕೊಟ್ಟರು ಎಂದು ಹೇಳಿದರು.
ಹಿಂದೆ ಬಿಜೆಪಿಯಲ್ಲಿ ಶಾಸಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಕೆಲಸ ಮಾಡಲು ಕಾರಣೀಭೂತರಾದ ಬಿಜೆಪಿಗೆ ಪುನಃ ಮರಳಬೇಕೆಂದು ತೀರ್ಮಾನಿಸಿದೆ. ಜತೆಗೆ ಹಿಂದುಳಿದ ವರ್ಗದ ರಾಜ್ಯಧ್ಯಕ್ಷನಾಗಿ 5 ವರ್ಷ ತುಂಬಿದ ಸಂರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ನಡೆವಳಿಕೆ ವಿರೋಧಿಸಿ ಗೌರಿ, ಗಣೇಶ ಹಬ್ಬದ ದಿನವೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಿಡಿಕಾರಿದರು.
ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರು ಕೊಟ್ಟ ದಿನಾಂಕದಂದು ಬಿಜೆಪಿ ಸೇರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ