ಮಂಡ್ಯ: ಕೇರಳದ ಕಸ ಕರ್ನಾಟಕಕ್ಕೆ ರವಾನೆಯಾಗುತ್ತಿದ್ದು, ಇದರಿಂದ ಮೈಸೂರು ಮತ್ತು ಮಂಡ್ಯ ವ್ಯಾಪ್ತಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ.
ಸಕ್ಕರೆ ನಗರಿ ಮಂಡ್ಯಗೆ ಕೇರಳದಿಂದ ಅತೀ ಹೆಚ್ಚು ತ್ಯಾಜ್ಯ ರವಾನೆಯಾಗುತ್ತಿದೆ. ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಕೇರಳದ ತ್ಯಾಜ್ಯ ವಸ್ತುಗಳಾದ ರಬ್ಬರ್, ಬಟ್ಟೆ, ಪ್ಲಾಸ್ಟಿಕ್ಗಳು ಲಾರಿ ಮೂಲಕ ಬರುತ್ತಿದೆ. ಆಲೆಮನೆಗಳಲ್ಲಿ ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ.
ಈ ಕುರಿತು ಎಚ್ಚೆತ್ತಿರುವ ಪೊಲೀಸರು ಕೇರಳದ ತ್ಯಾಜ್ಯ ತುಂಬಿದ ಎರಡು ಲಾರಿಯನ್ನು ಜಿಲ್ಲೆಯ ಶ್ರೀರಂಗಪಟ್ಣದಲ್ಲಿ ಜಪ್ತಿ ಮಾಡಿದ್ದಾರೆ. ಕೇರಳದಿಂದ ತ್ಯಾಜ್ಯ ತುಂಬಿರುವ 25 ಕ್ಕೂ ಹೆಚ್ಚು ಲಾರಿಗಳು ಕರ್ನಾಟಕಕ್ಕೆ ಬಂದಿವೆ ಎನ್ನಲಾಗಿದೆ. ಶ್ರೀರಂಗಪಟ್ಟಣದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣದ ಟೌನ್ ರಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ತ್ಯಾಜ್ಯ ತುಂಬಿದ ಲಾರಿಗಳನ್ನು ಜಪ್ತಿ ಮಾಡಿದ್ದಾರೆ.
ಲಾರಿಯಲ್ಲಿ ತಂದ ತ್ಯಾಜ್ಯವನ್ನು ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಲಾರಿ ಚಾಲಕರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರಿಸರ ಇಲಾಖೆ ಅಧಿಕಾರಿ ಅಶ್ವಿನಿ ಅವರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.