ಕೊಪ್ಪಳ: ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ತುಂಬಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಕೊಪ್ಪಳದಲ್ಲಿ ನೆಡದಿದೆ.
ಗಂಗಾವತಿ ತಾಲೂಕಿನ ಗುಂಡೂರು ಕ್ಯಾಂಪ್ನ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಈ ಅವಘಡ ಸಂಭವಿಸಿದ್ದು, ಲಾರಿ ಚಾಲಕ ಸಾಯಪ್ಪನ ಜಾಣ್ಮೆ ಮತ್ತು ಧೈರ್ಯದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಮೀನಿನಲ್ಲಿ ಹುಲ್ಲು ತುಂಬಿಕೊಂಡು ಬರುವಾಗ ಹೊಲದಲ್ಲಿದ್ದ ವಿದ್ಯುತ್ ಕಂಬದ ತಂತಿಗಳು ಹುಲ್ಲಿಗೆ ತಾಗಿ ಬೆಂಕಿ ಹತ್ತಿಕೊಂಡಿದೆ.
ತಕ್ಷಣ ಧೃತಿಗೆಡದೆ ಲಾರಿ ಡ್ರೈವರ್ ಜಮೀನಿನ ತುಂಬಾ ಬೆಂಕಿ ಹತ್ತಿದ ಲಾರಿಯನ್ನು ಚಾಲಾಯಿಸಿದ್ದಾನೆ. ಇದರಿಂದ ಗಾಳಿಗೆ ಬೆಂಕಿ ಪ್ರಮಾಣ ಇಳಿಮುಖವಾಗಿ ಬಾರೀ ಅನಾಹುತವನ್ನು ತಪ್ಪಿಸಿದ್ದಾನೆ. ಅಗ್ನಿಶಾಮಕ ಸ್ಥಳಕ್ಕೆ ಆಗಮಿಸುವವರೆಗೂ ಲಾರಿಯನ್ನು ಜಮೀನಿನಲ್ಲಿ ಸುತ್ತು ಹಾಕಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಸಂಪೂರ್ಣ ಬೆಂಕಿ ನಂದಿಸಿದ್ದಾರೆ. ಲಾರಿ ಡ್ರೈವರ್ ಚಾಣಕ್ಷತನದಿಂದ ಸುಟ್ಟು ಕರಕಲಾಗಬೇಕಿದ್ದ ಲಾರಿ ಸುರಕ್ಷಿತವಾಗಿದೆ. ಈ ಘಟನೆ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.