ಮೈಸೂರು: ಅಕ್ರಮವಾಗಿ ಕಲ್ಲು ಮಿಶ್ರಿತ ಮರುಳನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನ ರೈತರೇ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಈ ವೇಳೆ ರೈತರಿಗೆ ಧಮ್ಕಿ ಹಾಕಿದ ಚಾಲಕನಿಗೆ ರೈತರೇ ಧರ್ಮದೇಟು ನೀಡಿದ್ದಾರೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಅಳಗಂಚಿಪುರ ಗ್ರಾಮದ ಕಬಿನಿ ಬಲದಂಡೆ ಬಳಿ ಈ ಘಟನೆ ನಡೆದಿದೆ. ಇಲ್ಲಿ ರಾಜಾರೋಷವಾಗಿ ಕಲ್ಲು ಮಿಶ್ರಿತ ಮಣ್ಣನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ಅರಿತ ರೈತ ಸಂಘದ ಮುಖಂಡರು, ಸ್ಥಳೀಯ ರೈತರ ಜೊತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಆಗ ಮಣ್ಣು ಸಾಗಾಟ ನಡೆಯುತ್ತಿದ್ದದ್ದು ಕಣ್ಣಿಗೆ ಬಿದ್ದಿದೆ. ಕೂಡಲೇ ಬಿಳಿಕೆರೆ ಪೊಲೀಸರಿಗೆ ಮಾಹಿತಿ ತಿಳಿಸಿ 10 ಕ್ಕೂ ಹೆಚ್ಚು ಲಾರಿ, ಒಂದು ಜೆಸಿಬಿ ಹಾಗೂ ಟಿಪ್ಪರ್ ಗಳನ್ನ ಹಿಡಿದಿದ್ದಾರೆ. ಈ ವೇಳೆ ರೈತರಿಗೆ ಲಾರಿ ಚಾಲಕ ಧಮ್ಕಿ ಹಾಕಿದ್ದಾನೆ. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರ ಮುಂದೆಯೇ ಲಾರಿ ಚಾಲಕನಿಗೆ ಧರ್ಮದೇಟು ಕೊಟ್ಟಿದ್ದಾರೆ.
ಕಬಿನಿ ನಾಲೆಯ ತಡೆಗೋಡೆಗಳನ್ನ ಕೊರೆದು ಮಣ್ಣನ್ನು ಸಾಗಿಸುತ್ತಿದ್ದು, ನಾಲೆಗೆ ಹಾನಿಯಾಗುತ್ತಿದೆ ಎಂದು ದೂರು ನೀಡಿರುವ ರೈತರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.