ಬೆಂಗಳೂರು: ಲೋಕಸಭಾ ಚುನಾವಣಾ ಕಾರ್ಯಕ್ಕೆ ಗೈರಾದ ರೆವಿನ್ಯೂ ಇನ್ಸ್ಪೆಕ್ಟರ್ ಅವರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ಮಂಜುನಾಥ್ ರೆಡ್ಡಿ ಚುನಾವಣಾ ಕಾರ್ಯಗಳಿಗೆ ಗೈರಾಗುತ್ತಿದ್ದರು. ಆದರೆ ಹಾಜರಾತಿಯಲ್ಲಿ ಮಾತ್ರ ಹೆಸರು ನಮೂದಿಸಿ ಅಶ್ರದ್ಧೆ, ಅಸಡ್ಡೆ, ಅದಕ್ಷತೆ ತೋರಿದ್ದಾರೆ.
ಚುನಾವಣಾ ಲೋಪ ಎಸಗಿದ ಸಂಬಂಧ ಅನೇಕ ಬಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ ಮಂಜುನಾಥ್ ರೆಡ್ಡಿ ಅವರು ತಮ್ಮ ಚಾಳಿಯನ್ನು ಮುಂದುವರಿಸಿದ್ದರು. ಹೀಗಾಗಿ ಅವರನ್ನು ಜಿಲ್ಲಾಧಿಕಾರಿ ವಿಜಯಶಂಕರ್ ಹಾಗೂ ಚುನಾವಣಾಧಿಕಾರಿ ಮದನ್ ಮೋಹನ್ ಅಮಾನತುಗೊಳಿಸಿದ್ದಾರೆ.
ಚುನಾವಣೆಗೆ ಲೋಪ ಮಾಡಿದವರು ಯಾರೆ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.