ಬೆಂಗಳೂರು: ಶಿವಮೊಗ್ಗದಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಘೋಷಣೆ ಮಾಡಿರುವ ಈಶ್ವರಪ್ಪ (K.S Eshwarappa) ಅವರನ್ನು ಮನವೊಲಿಸಲು ಬಿಜೆಪಿ (BJP) ನಾಯಕರು ಕಸರತ್ತು ಮಾಡುತ್ತಿದ್ದಾರೆ.
ಮನವೊಲಿಕೆಗೆ ಬಗ್ಗದ ಕಾರಣ ಈಶ್ವರಪ್ಪ ಅವರಿಗೆ ನರೇಂದ್ರ ಮೋದಿ (PM Narendra Modi) ಅಥವಾ ಅಮಿತ್ ಶಾ (Amit Shah) ಮೂಲಕವೇ ಕರೆ ಮಾಡಿಸಲು ರಾಜ್ಯ ನಾಯಕರು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಇಂದು ಶಿವಮೊಗ್ಗಕ್ಕೆ (Shivamogga) ಪ್ರಚಾರ ಭಾಷಣಕ್ಕೆ ಬರುತ್ತಿರುವ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲೇ ಭೇಟಿ ಮಾಡಿಸಲು ಪ್ಲ್ಯಾನ್ ನಡೆದಿದೆ. ಇದರೊಂದಿಗೆ ಮೋದಿ ಸಮಾವೇಶಕ್ಕೆ ಈಶ್ವರಪ್ಪ ಅವರನ್ನು ಕರೆ ತರಲು ರಾಜ್ಯ ನಾಯಕರು ಮುಂದಾಗಿದ್ದಾರೆ.
ಕರ್ನಾಟಕದ ಕಮಲ ನಾಯಕರು ಮನವೊಲಿಕೆಗೆ ಪ್ರಯತ್ನ ಮಾಡುತ್ತಿದ್ದರೂ ಈಶ್ವರಪ್ಪ ಅವರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಇಂದು ಮಧ್ಯಾಹ್ನ ಶಿವಮೊಗ್ಗದಲ್ಲಿ ನಡೆಯಲಿರುವ ಸಮಾವೇಶಕ್ಕೆ ಈಶ್ವರಪ್ಪ ಹೋಗುತ್ತಾರಾ? ಇಲ್ಲವೋ ಎನ್ನುವುದು ಸದ್ಯದ ಕುತೂಹಲ. ಇದನ್ನೂ ಓದಿ: ಡಾ.ಮಂಜುನಾಥ್ ಪರ ಭರ್ಜರಿ ಕ್ಯಾಂಪೇನ್- ಡಿಕೆ ಬ್ರದರ್ಸ್ ವಿರುದ್ಧ ಮುನಿರತ್ನ ಕಿಡಿ
ಈಶ್ವರಪ್ಪ ಅವರು ತನ್ನ ಪುತ್ರ ಕಾಂತೇಶ್ ಅವರನ್ನು ಹಾವೇರಿಯಿಂದ (Haveri) ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದ್ದರು. ಆದರೆ ಹಾವೇರಿ (Haveri) ಟಿಕೆಟ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬಿಜೆಪಿ ನೀಡಿತ್ತು. ಈ ವಿಚಾರಕ್ಕೆ ಈಶ್ವರಪ್ಪ ಸಿಟ್ಟಾಗಿದ್ದು ಯಡಿಯೂರಪ್ಪ ವಿರುದ್ಧ ಕಿಡಿಕಾರಿ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ ತಾವು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ನಾನೇಕೆ ಸ್ಪರ್ಧಿಸ್ತಿದ್ದೇನೆ ಎಂದು ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ಆರಗ ತಂಡಕ್ಕೆ ಹೇಳಿದ್ದೇನೆ. ಮೋದಿ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ. ಎಲೆಕ್ಷನ್ ಗೆದ್ದು ಮೋದಿಗೆ ಬೆಂಬಲ ಕೊಡ್ತೇನೆ. ಪಕ್ಷದಲ್ಲಿ ಹಿಂದುತ್ವದ ಪರವಾಗಿ ಕೆಲಸ ಮಾಡಿದವರಿಗೆ ಮೋಸ ಮಾಡಿದ್ದಾರೆ. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಪಕ್ಷ ಒದ್ದಾಡುತ್ತಿದೆ. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಪಡೆದಿದ್ದು 6 ಸೀಟ್. ಯಡಿಯೂರಪ್ಪ ಹಠ ಹಿಡಿದು ಮಗನನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ತಾಯಿಯಂತಿರುವ ಪಕ್ಷದ ಕುತ್ತಿಗೆ ಹಿಸುಕುತ್ತಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದು ಈಶ್ವರಪ್ಪ ಖಡಕ್ಕಾಗಿ ನುಡಿದಿದ್ದಾರೆ. ಇದನ್ನೂ ಓದಿ: ಒಂದಲ್ಲ ಎರಡು ಪ್ರಶಸ್ತಿ ಗೆದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್