ನವದೆಹಲಿ: ಸಂಪುಟ ವಿಸ್ತರಣೆ ಇನ್ನೂ ಒಂದು ವಾರ ಮುಂದೂಡಿಕೆ ಆಗಿದೆ. ಇವತ್ತು ನಡೆಯಬೇಕಿದ್ದ ಪ್ರಮಾಣ ವಚನ ರದ್ದಾಗಿದೆ ಶನಿವಾರ ಅಥವಾ ಭಾನುವಾರ ಸಚಿವರ ಲಿಸ್ಟ್ ಫೈನಲ್ ಆಗಲಿದ್ದು, ಮುಂದಿನ ಬುಧವಾರದೊಳಗೆ ಪ್ರಮಾಣ ವಚನ ಸಾಧ್ಯತೆ ಹೆಚ್ಚಿದೆ. ಈ ನಡುವೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಂದಲೇ ಮೂರು ಡಿಸಿಎಂ ಬ್ರಹ್ಮಾಸ್ತ್ರ ಪ್ರಯೋಗವಾಗಿದ್ದು, ಕುತೂಹಲ ಹೆಚ್ಚಾಗಿದೆ.
ಡಿಕೆಶಿ ಸಿಎಂ ಆಗಿ ಎರಡು ತಿಂಗಳು ಹತ್ತಿರ ಬಂತು. ಆದ್ರೆ ಸಂಪುಟ ವಿಸ್ತರಣೆಗೆ ಆಗಾಗ್ಗೆ ಅಡೆತಡೆ ಎದುರಾಗ್ತಿದೆ. ಕಳೆದ ವಾರ ಮಲ್ಲಿಕಾರ್ಜುನ ಅಲಭ್ಯತೆ, ಈ ವಾರ ದೆಹಲಿಯಲ್ಲಿ ನೀಟ್ ಹೋರಾಟ (NEET Protest) ಗಲಾಟೆ. ಹಾಗಾಗಿ ಇವತ್ತು ನಡೆಯಬೇಕಿದ್ದ ಸಚಿವರ ಪ್ರಮಾಣ ವಚನ ರದ್ದಾಗಿದೆ. ನಿನ್ನೆಯಷ್ಟೇ ರಾಜಭವನದಲ್ಲಿ ಸಿದ್ಧತೆಯೂ ನಡೆದಿತ್ತು. ರಾಜಭವನಕ್ಕೆ ಸಮಯವನ್ನ ಕೇಳಿದ್ರು.

ಇನ್ನು ಇದೇ ಶನಿವಾರ ಅಥವಾ ಭಾನುವಾರ ಸಚಿವರ ಪಟ್ಟಿ ಫೈನಲ್ ಆಗುವ ಸಾಧ್ಯತೆ ಇದೆ. ರಾಹುಲ್ ಮಾತೇ ಅಂತಿಮ.. ರಾಹುಲ್ ಬಳಿ ಎಲ್ಲ ರಿಪೋರ್ಟ್ ಇದೆ ಅಂತಾ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂದೇಶ ರವಾನಿಸಿದ್ದಾರೆ. ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ಪಟ್ಟಿಯಲ್ಲಿ ಎಷ್ಟು ಜನರಿಗೆ ಸಿಕ್ಕರೂ ಅದು ಅದೃಷ್ಟವೇ ಸರಿ. ಈ ನಡುವೆ ಆಗಸ್ಟ್ 6 ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುಂಚೆ ಸಚಿವರ ಪ್ರಮಾಣ ವಚನ ಆಗಬೇಕಿದ್ದು, ಮುಂದಿನ ವಾರ ಬುಧವಾರದೊಳಗೆ ಎಲ್ಲವೂ ಮುಗಿಯುವ ಸಾಧ್ಯತೆ ಇದೆ.
ಡಿಕೆಶಿ ಹೊಸ ಆಟ ಶುರು
ಇದ್ದಕ್ಕಿದ್ದಂತೆ ಸಿಎಂ ಡಿಕೆಶಿ ಹೊಸ ಆಟ ಶುರು ಮಾಡಿದ್ದಾರೆ. ಮೂರು ಡಿಸಿಎಂ ಸೃಷ್ಟಿಸಿ ರಾಜಕೀಯ ಚಾಣಾಕ್ಷ ನಡೆ ತೋರಲು ಡಿಕೆಶಿ ಬಯಸಿದ್ದಾರೆ. ತನ್ನ ನಂತರದ ಉತ್ತರಾಧಿಕಾರತ್ವಕ್ಕೆ ಏಕವ್ಯಕ್ತಿ ಪೈಪೋಟಿಗೆ ಬ್ರೇಕ್ ಹಾಕುವ ಪ್ಲ್ಯಾನ್ ಇದ್ದು, ಜಾತಿ ಆಧಾರಿತ ಡಿಸಿಎಂ ಸೃಷ್ಟಿಸಿ ಒಂದೇ ಏಟಿಗೆ 2 ಕಲ್ಲು ಹೊಡೆಯುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.

ಹಾಗಾಗಿ ಲಿಂಗಾಯತ ಸಮುದಾಯದಿಂದ ಎಂ.ಬಿ ಪಾಟೀಲ್, ಎಸ್ಟಿ ಸಮುದಾಯದಿಂದ ಸತೀಶ್ ಜಾರಕಿಹೊಳಿ ಅವರನ್ನ ಡಿಸಿಎಂ ಮಾಡುವ ಪ್ರಸ್ತಾಪವನ್ನ ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಿದ್ದರಾಮಯ್ಯ ಸರ್ಕಾರದ ಅವಧಿ ವಿರೋಧಿಗಳೇ ಈಗ ಡಿಕೆಶಿಗೆ ಮಿತ್ರರಂತೆ. ಆವತ್ತು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡ್ತಿದ್ದವರ ಪರ ಇವತ್ತು ಡಿಕೆಶಿ ಬ್ಯಾಟಿಂಗ್ ನಡೆಸಿದ್ದಾರಂತೆ. ರಾಜಣ್ಣ, ಜಮೀರ್ ಪರ ಡಿಕೆಶಿ ಒಲವು ತೋರಿದ್ದು, ಹೈಕಮಾಂಡ್ ತೀರ್ಮಾನ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಮುಂದಿನ ವಾರ ಸಂಪುಟ ವಿಸ್ತರಣೆ ಕುತೂಹಲಕ್ಕೆ ತೆರೆ ಬೀಳಲಿದ್ದು, ಡಿಕೆಶಿ ಹೊಸ ಲೆಕ್ಕಚಾರದ ಸಂಪುಟ 7 ವರ್ಷದ ಸಿಎಂ ಆಸೆಯೋ? ಭವಿಷ್ಯದ ಮೆಗಾ ಪ್ಲ್ಯಾನೋ? ಎಂಬುದನ್ನ ಕಾದುನೋಡಬೇಕಿದೆ.
