ಬೆಂಗಳೂರು: ಕಾವೇರಿ (Kaveri) ವಿಚಾರದಲ್ಲಿ ರಾಜ್ಯ ಸರ್ಕಾರ ಉಡಾಫೆಯಾಗಿ ನಡೆದುಕೊಳ್ಳುತ್ತಿದೆ. ಇವರು ಹೀಗೆ ನಿರ್ಲಕ್ಷ್ಯ ಮಾಡಿದರೆ ಸ್ವಾಮೀಜಿಗಳು, ರೈತರು, ಬೆಂಗಳೂರಿನ ನಾಗರಿಕರು ದಂಗೆ ಏಳುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಕಾವೇರಿ ವಿಚಾರದಲ್ಲಿ ಬಿಜೆಪಿಯ (BJP) ಮುಂದಿನ ಹೋರಾಟದ ಕುರಿತು ಪಕ್ಷದ ಕಚೇರಿಯಲ್ಲಿ ತಮ್ಮ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕಾವೇರಿ ವಿಚಾರದಲ್ಲಿ ಈ ಸರ್ಕಾರ ತೀವ್ರವಾದ ಗಂಡಾಂತರ ತಂದಿದೆ. ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬಂದಿದೆ. ಸುಪ್ರೀಂ ಕೋರ್ಟ್ನಲ್ಲಿ (Supreme Court) ಸರಿಯಾಗಿ ವಾದ ಮಾಡದೇ ಮತ್ತೆ 7.5 ಟಿಎಂಸಿ ನೀರು ಬಿಡುವ ಪರಿಸ್ಥಿತಿಗೆ ತಂದಿದೆ. ಇಷ್ಟೆಲ್ಲಾ ಆದರೂ ರಾಜ್ಯದ ಜನರಿಗೆ ಸರ್ಕಾರ ಮುಂದೇನು ಮಾಡುತ್ತದೆ ಎಂದು ಹೇಳಿಲ್ಲ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಕಾವೇರಿ ವಿಷಯ ಉಲ್ಬಣವಾಗಲು ಡಿಕೆಶಿ ಕಾರಣ, ತಕ್ಷಣ ರಾಜೀನಾಮೆ ನೀಡಲಿ: ಈಶ್ವರಪ್ಪ ಆಗ್ರಹ
- Advertisement 2
- Advertisement 3
ರಾಜ್ಯ ಸರ್ಕಾರ ಆರಂಭದಿಂದಲೂ ಗ್ಯಾರಂಟಿ ಹೆಸರು ಹೇಳಿ ಈಗ ಕಂಡೀಷನ್ ಹಾಕಿ ಅರ್ಧಂಬರ್ಧ ಜಾರಿ ಮಾಡುತ್ತದೆ. ಬೆಂಗಳೂರು (Bengaluru) ಅಂತರಾಷ್ಟ್ರೀಯ ನಗರ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾತೆತ್ತಿದರೆ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತಾರೆ. ಆದರೆ, ಬೆಂಗಳೂರಿನ ಕುಡಿಯುವ ನೀರಿನ ಬಗ್ಗೆ ಮಾತನಾಡುವುದಿಲ್ಲ. ನಮಗೆ ಬೇಕಿರುವುದು ನೀರಿನ ಗ್ಯಾರಂಟಿ. ಬೆಂಗಳೂರಿಗೆ ಪ್ರತ್ಯೇಕವಾಗಿ 4.5 ಟಿಎಂಸಿ ನೀರು ಕೊಡಲು ಟ್ರಿಬ್ಯುನಲ್ ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾವೇರಿ ಸಮಸ್ಯೆ ಪರಿಹಾರಕ್ಕೆ ಕೂಡಲೇ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು: ಹೆಚ್ಡಿ ರೇವಣ್ಣ
- Advertisement 4
ತಮಿಳುನಾಡು (Tamil Nadu) ಹೆಚ್ಚುವರಿ ನೀರು ಬಳಕೆ ಮಾಡಿ ಅಕ್ರಮವಾಗಿ ಬೆಳೆ ಬೆಳೆದಿದ್ದು, ಅದರ ಬಗ್ಗೆ ರಾಜ್ಯ ಸರ್ಕಾರ ಮಾತನಾಡಿಲ್ಲ. ನಮಗೆ ಮುಂಗಾರು ಮುಕ್ತಾಯವಾಗಿದೆ. ತಮಿಳುನಾಡಿಗೆ ಮುಂದಿನ ದಿನಗಳಲ್ಲಿ ಮಳೆ ಬರಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು. ಈ ವಿಷಯ ಹೇಳಿದರೆ ನಾವು ರಾಜಕಾರಣ ಮಾಡುತ್ತೇವೆ ಎನ್ನುತ್ತಾರೆ. ಇದರ ಮೇಲೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕಾರಣ ಮಾಡುತ್ತಾರೆ. ತಮಿಳುನಾಡು ಸಿಎಂ ಜೊತೆ ಮಾತನಾಡಿ ಅಂದರೆ ಮಾತನಾಡುವುದಿಲ್ಲ. ಅದರ ಬದಲು ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ಅದರಲ್ಲಿ ಸಿದ್ದರಾಮಯ್ಯ ಪರಿಣಿತರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ
ಸರ್ಕಾರದ ವಿರುದ್ಧ ಪ್ರತಿಭಟನೆ:
ಬರ ಬಂದರೆ ಕೇಂದ್ರದ ಕಡೆ ತೋರಿಸುತ್ತಾರೆ. ರಾಜ್ಯ ಸರ್ಕಾರ ಪರಿಹಾರ ಕೊಡಬಾರದು ಎಂದು ಏನೂ ನಿಯಮ ಇಲ್ಲ. ನಾವು ಪ್ರವಾಹ ಬಂದಾಗ ಕೇಂದ್ರದ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವೆ. ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ನೀವು ಜನರಿಗೆ ದ್ರೋಹ ಮಾಡಿದ್ದೀರಿ. ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಶನಿವಾರ ಪ್ರತಿಭಟನೆ (Protest) ಮಾಡಲಾಗುವುದು. ಮುಂದಿನ ದಿನಗಳಲ್ಲಿ 28 ಲೋಕಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಬಂಗಾರಪ್ಪ ಸಿಎಂ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು: ಮಧು ಬಂಗಾರಪ್ಪ
ಕಾವೇರಿ ನೆಲ-ಜಲ ವಿಚಾರ ಬಂದಾಗ ನಾವು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಆ ದೃಷ್ಟಿಯಿಂದ ನಾವು ಸಹಕಾರ ಕೊಡುತ್ತೇವೆ. ಸರ್ವಪಕ್ಷದ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂದು ತೆಗೆದುಕೊಂಡ ತೀರ್ಮಾನ ಪಾಲನೆ ಮಾಡದಿದ್ದರೆ ನಾವು ಮಾತನಾಡುತ್ತೇವೆ. ಸುಪ್ರೀಂ ಕೋರ್ಟ್ನಲ್ಲಿ ಇವರು ಮಧ್ಯಂತರ ಅರ್ಜಿ ಹಾಕಲಿಲ್ಲ ಎಂದರು.
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಬೇಕಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತಂದಾಗ ಸುಪ್ರೀಂ ಕೋರ್ಟ್ ಅದನ್ನು ತಳ್ಳಿ ಹಾಕಿದೆ. ಅದರ ಬದಲು ಈಗಲಾದರೂ ಸರ್ಕಾರ ಮೇಲ್ಮನವಿ ಸಲ್ಲಿಸಿ ಇದುವರೆಗೂ ವಿಚಾರಣೆಯಲ್ಲಿ ಚರ್ಚೆಗೆ ಬಾರದ ಬೆಂಗಳೂರಿನ ಕುಡಿಯುವ ನೀರು, ತಮಿಳುನಾಡು ಹೆಚ್ಚಿಗೆ ನೀರು ಬಳಕೆ ಮಾಡಿಕೊಂಡಿದ್ದು, ನಮ್ಮಲ್ಲಿ ಮುಂಗಾರು ಮುಕ್ತಾಯವಾಗಿದ್ದು, ತಮಿಳುನಾಡಿಗೆ ಹಿಂಗಾರು ಮಳೆ ಬರುವ ವಿಚಾರಗಳನ್ನು ಸುಪ್ರೀಂ ಕೋರ್ಟ್ ಮುಂದೆ ಹಾಕಬೇಕು. ಅದನ್ನು ಸುಪ್ರೀಂ ಕೋರ್ಟ್ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ
ಪರಿಹಾರ ನೀಡಲಿ:
ರಾಜ್ಯ ಸರ್ಕಾರ ಕ್ಯಾಬಿನೆಟ್ನಲ್ಲಿ ಈಗ ಬಿಟ್ಟಿರುವ ನೀರಿನ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು. ಬರ ತಾಲೂಕಿನ ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡಬೇಕು. ಕಾವೇರಿ ಕೊಳ್ಳದ ತಾಲೂಕುಗಳ ರೈತರಿಗೆ ಪರಿಹಾರ (Relief) ನೀಡಬೇಕು. ನಗರಗಳ ನೀರಿಗೆ ಮುಂದಿನ ಯೋಜನೆ ಏನು ಎಂದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಜೆಡಿಎಸ್ (JDS) ಜೊತೆಗಿನ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ಬಗ್ಗೆ ಹೈಕಮಾಂಡ್ ನಾಯಕರು ಮಾತುಕತೆ ನಡೆಸುತ್ತಾರೆ. ಆ ನಂತರ ರಾಜ್ಯದ ನಾಯಕರ ಜೊತೆ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಮಂಡ್ಯ ಬಂದ್ಗೆ ಕರೆ – ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್
Web Stories